ಮಡಿಕೇರಿ, ಜು. 14: ಎಮ್ಮೆಮಾಡುವಿನ 8ನೇ ತರಗತಿಯ ಫತಾಹ್ ಎಂಬ ಬಾಲಕನೋರ್ವ ವೀಡಿಯೋಗ್ರಫಿ ಸಹಾಯಕ ಜಕ್ರಿಯಾರೊಡಗೂಡಿ ತಯಾರಿಸಿದ ವೀಡಿಯೋವೊಂದು ವೈರಲ್ ಆಗಿ ಸಾಮಾಜಿಕ ಜಾಲ ತಾಣದಲ್ಲಿ ಇಂದು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸುದ್ದಿ ಮಾಡಲು ಕಾರಣವಾಯಿತು.ಎಮ್ಮೆಮಾಡುವಿನ ಕಾವೇರಿ ತೀರದಲ್ಲಿ ಮಾತನಾಡಿದ ಈ ಬಾಲಕ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಸಕ್ತ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ಯಾವದೇ ನೆರವು ನೀಡಿಲ್ಲ. ಕೊಡಗಿನ ಜನ ಮಳೆಗಾಲದಲ್ಲಿ ತೀವ್ರ ಬವಣೆ ಪಡುತ್ತಿರುವ ಚಿತ್ರಣವನ್ನು ವಿವರವಾಗಿ ಬಿಚ್ಚಿಟ್ಟಿದ್ದಾನೆ. ಈ ವೀಡಿಯೋ ಮುಖ್ಯಮಂತ್ರಿ ಕುಮಾರಸ್ವಾಮಿಯವರವರೆಗೂ ತಲಪಿ ತಾನು ಸದ್ಯದಲ್ಲಿಯೇ ಕೊಡಗು ಜಿಲ್ಲೆಗೆ ಬರಲಿದ್ದೇನೆ. ಜಿಲ್ಲೆಯ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ನಡೆಸುವದಾಗಿ ಅವರು ಪ್ರತಿಕ್ರಿಯಿಸಿರುವದು ವಿಶೇಷವೆನಿಸಿದೆ.