ಮಡಿಕೇರಿ, ಜು. 14: ಪುತ್ತೂರು ಗ್ರಾಮದ ಸಂತೆಕಟ್ಟೆ ಬಳಿ ಕೊಡಗಿಗೆ ಸೇರಿದ ಕಾರು ಹಾಗೂ ಟೆಂಪೊ ನಡುವೆ ಮುಖಾಮುಖಿ ಅವಘಡವಾಗಿದ್ದು, ಬೆಂಗಳೂರಿನ ಇಂಜಿನಿಯರ್ ಶ್ರವಣ್ ಕಾಮತ್ ಮತ್ತು ಟೆಂಪೊ ಚಾಲಕ ಸುಂದರ ಶೆಟ್ಟಿಗಾರ್ ಮೃತಪಟ್ಟಿದ್ದಾರೆ. ಅಪಘಾತ ಇಂದು ಬೆಳಿಗ್ಗೆ ಸಂಭವಿಸಿದೆ.ಕಾರು ಕೆಎ-12, ಝೆಡ್-1523 ಮೂರ್ನಾಡಿನ ಕೆಂಬಡತಂಡ ರೂಪಾ ಅವರಿಗೆ ಸೇರಿದ್ದು, ಕಾರನ್ನು ಅವರ ಪುತ್ರ ಡಾ. ಗೌರವ್ ಐಯ್ಯಪ್ಪ ಮಣಿಪಾಲದಲ್ಲಿ ಇರಿಸಿಕೊಂಡಿದ್ದರು. ಗೌರವ್ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಅವರ ಮಿತ್ರ, ಬೆಂಗಳೂರಿನಲ್ಲಿ (ಮೊದಲ ಪುಟದಿಂದ) ಇಂಜಿನಿಯರ್ ಆಗಿರುವ ಶ್ರವಣ್ ಕಾಮತ್ ಕಾರನ್ನು ಕೇಳಿ ಪಡೆದಿದ್ದರು. ಕಾಮತ್ ತಮ್ಮ ಊರಾದ ಬ್ರಹ್ಮಾವರಕ್ಕೆ ತೆರಳುತ್ತಿದ್ದಾಗ ರಸ್ತೆ ವಿಭಜಕಕ್ಕೆ ಬಡಿದು ಟೆಂಪೋಗೆ ಮುಖಾಮುಖಿ ಆಗಿದ್ದಾರೆ. ಕಾರಿನಲ್ಲಿ ಇವರೊಬ್ಬರೇ ಇದ್ದು, ಟೆಂಪೋದಲ್ಲಿ ಇದ್ದ ಇತರ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಉಡುಪಿ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.