ಮಡಿಕೇರಿ, ಜು. 13: ವಿಧಾನ ಪರಿಷತ್ ಸದಸ್ಯ ಎಂ.ಪಿ ಸುನೀಲ್ ಸುಬ್ರಮಣಿ ಅವರು ವಿಧಾನ ಪರಿಷತ್‍ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ಗಮನ ಸೆಳೆದಿದ್ದಾರೆ. ಕೊಡಗು ಜಿಲ್ಲೆಯಲ್ಲಿರುವ ಮಡಿಕೇರಿ ತಾಲೂಕಿನ ನಾಲ್ಕುನಾಡು ಅರಮನೆ ಪ್ರಸ್ತುತ ರಾಜ್ಯ ಸರ್ಕಾರದ ಸುಪರ್ದಿಯಲ್ಲಿದೆಯೇ? ಎಂಬ ಸುನೀಲ್ ಸುಬ್ರಮಣಿ ಅವರ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕøತಿ ಸಚಿವರು ಹೌದು ಎಂದು ಉತ್ತರಿಸಿದ್ದಾರೆ.

ಇದ್ದಲ್ಲಿ ಈ ನಾಲ್ಕುನಾಡು ಅರಮನೆಯನ್ನು ಸುಸ್ಥಿತಿಯಲ್ಲಿ ಕಾಪಾಡಲು ಯಾವ ಕ್ರಮ ವಹಿಸಲಾಗಿದೆ? ಎಂಬ ಪ್ರಶ್ನೆಗೆ ನಾಲ್ಕುನಾಡು ಅರಮನೆಯ ಒತ್ತುವರಿಯಾಗಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸಹಕಾರದೊಂದಿಗೆ ತೆರವುಗೊಳಿಸಿ ಈ ಭಾಗದಲ್ಲಿ 167.20 ಮೀ. ಚೈನ್‍ಲಿಂಕ್ ಫೆನ್ಸಿಂಗ್‍ನ್ನು ಅಳವಡಿಸಲಾಗಿದೆ. ಸೋಲಾರ್ ಲೈಟಿಂಗ್ ವ್ಯವಸ್ಥೆ, ಅರಮನೆಗೆ ಪಕ್ಷಿಗಳು ಒಳ ನುಸುಳದಂತೆ ರಕ್ಷಣೆಗೆ ನೈಲಾನ್ ನೆಟ್ ಅನ್ನು ಅಳವಡಿಸಲಾಗಿದೆ. ಹಾಳಾಗಿದ್ದ ಕಿಟಕಿಗಳನ್ನು ರಿಪೇರಿ ಮಾಡಿ ಸೊಳ್ಳೆ ಪರದೆ ಅಳವಡಿಸಲಾಗಿದೆ. ಒಟ್ಟಾರೆ ಈ ಕಾಮಗಾರಿಗಳಿಗೆ ರೂ. 10.79 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ. ಅರಮನೆಯ ರಕ್ಷಣೆಗಾಗಿ 24 ಗಂಟೆಯೂ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಸಾಲಿನಲ್ಲಿ ನಿರ್ವಹಣೆಗೆ ಬಿಡುಗಡೆ ಮಾಡಲಾದ ಅನುದಾನವೆಷ್ಟು? ಎಂಬ ಪ್ರಶ್ನೆಗೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಯಾವದೇ ಅನುದಾನವನ್ನು ನಿಗದಿ ಪಡಿಸಿಕೊಂಡಿರುವದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಒಂದು ವೇಳೆ ರಾಜ್ಯ ಸರ್ಕಾರದ ಸುಪರ್ದಿಯಲ್ಲಿಲ್ಲದಿದ್ದರೆ, ಕೇಂದ್ರ ಸರ್ಕಾರಕ್ಕೆ ನಿರ್ವಹಣೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆಯೇ? ಎಂಬ ಪ್ರಶ್ನೆಗೆ 1987 ರಲ್ಲಿ ರಾಜ್ಯ ಸಂರಕ್ಷಿತ ಸ್ಮಾರಕವೆಂದು ಘೋಷಣೆಯಾಗಿರುವದರಿಂದ ಕೇಂದ್ರ ಸರ್ಕಾರಕ್ಕೆ ನಿರ್ವಹಣೆಗೆ ಪ್ರಸ್ತಾವನೆಯನ್ನು ಸಲ್ಲಿಸುವ ಅಗತ್ಯವಿರುವದಿಲ್ಲ ಎಂದು ಸಚಿವರು ತಿಳಿಸಿದರು.

ಮೈಸೂರು- ತಲಚೇರಿ ನಡುವಿನ ರೈಲು ಮಾರ್ಗದ ಸರ್ವೆ ಕಾರ್ಯ ನಡೆಯುತ್ತಿರುವದು ನಿಜವೇ ಹಾಗಿದ್ದಲ್ಲಿ ಈ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಅನುಮತಿ ನೀಡಿರುವದು ಯಾರು? ಎಂಬ ಪ್ರಶ್ನೆಗೆ ಮೈಸೂರು-ತಲಚೇರಿ ನಡುವಿನ ರೈಲು ಮಾರ್ಗದ ಸರ್ವೆ ಕಾರ್ಯ ನಡೆಸುವದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವತಿಯಿಂದ ಯಾವದೇ ಅನುಮತಿಯನ್ನು ನೀಡಲಾಗಿಲ್ಲ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಜಿಲ್ಲೆಯ ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಖಾಸಗಿ ಕಂಪೆನಿಯ ಸಿಬ್ಬಂದಿಗಳ ತಂಡ ಸರ್ವೆ ಕಾರ್ಯ ಮಾಡುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯೇ? ಈ ಸರ್ವೆ ಕಾರ್ಯವನ್ನು ನಿಲ್ಲಿಸುವಲ್ಲಿ ಸರ್ಕಾರದ ಕ್ರಮಗಳೇನು? ಎಂಬ ಪ್ರಶ್ನೆಗೆ ಹೌದು. ಅನುಮತಿ ಇಲ್ಲದೆ ಸರ್ವೆ ಕಾರ್ಯ ನಡೆಸುವ ತಂಡವನ್ನು ಕಾನೂನಿನ್ವಯ ಸ್ಥಗಿತಗೊಳಿಸಲಾಗುವದು ಎಂದು ತಿಳಿಸಿದರು.

ಈ ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿಷಯದಲ್ಲಿ ರೈಲ್ವೆ ಇಲಾಖೆಯಿಂದ ರಾಜ್ಯ ಸರ್ಕಾರದ ನಡುವೆ ಆಗಿರುವ ಪತ್ರಗಳ ವಿವರ ನೀಡುವದು. ಇದರಲ್ಲಿ ರಾಜ್ಯ ಸರ್ಕಾರದ ನಿಲುವೇನು? ಎಂಬ ಪ್ರಶ್ನೆಗೆ ರೈಲ್ವೆ ಇಲಾಖೆಯಿಂದ ಬಂದ ಸರ್ಕಾರಕ್ಕೆ ಸಲ್ಲಿಸಿರುವ ಪ್ರಶ್ನೆಗಳ ವಿವರ ಇಂತಿವೆ. ದಿನಾಂಕ; 29.9.2016 ಪತ್ರ ಸಂಖ್ಯೆ W.337/ಅಓ/ಇಖS/ಎಗಿ ಯಲ್ಲಿ ಈ ಯೋಜನೆಯು ದಕ್ಷಿಣ ರೈಲ್ವೆಯ ವ್ಯಾಪ್ತಿಗೆ ಒಳಪಡುವ ಬಗ್ಗೆ ಮಾಹಿತಿ ನೀಡಿರುತ್ತದೆ. ದಿ; 19.9.2016 ಪತ್ರ ಸಂಖ್ಯೆ W.359/ಅಓ/ಃಓಅ/WPಖ/2016.17/533 ಈ ಯೋಜನೆಯ ಬಗ್ಗೆ ಅಂತಿಮ ಅಂತಿಮ ನಿರ್ಣಯ ತೆಗೆದುಕೊಳ್ಳುವದರಿಂದ ಅನುದಾನದ ಅವಶ್ಯಕತೆ ಇಲ್ಲದಿರುವದರ ಬಗ್ಗೆ ಮತ್ತು ದಿನಾಂಕ; 23.10.2017 ಪತ್ರ ಸಂಖ್ಯೆ W.193/ಅಓ/ಃಓಅ/ಉeಟಿಟ ಈ ಯೋಜನೆಯು ನೈರುತ್ಯ ರೈಲ್ವೆ ಇಲಾಖೆಯ ವ್ಯಾಪ್ತಿಗೆ ಒಳಪಡದೇ ಇರುವದರಿಂದ ದಕ್ಷಿಣ ರೈಲ್ವೆ ಕೆಆರ್‍ಡಿಸಿಎಲ್ ಕೇರಳ ಇಲ್ಲಿನ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸುವಂತೆ ಕೋರಿ ಈ ಪತ್ರದಲ್ಲಿ ತಿಳಿಯಪಡಿಸಿದೆ. ಈ ಯೋಜನೆಯ ಅನುಷ್ಠಾನದ ಬಗ್ಗೆ ಸ್ಥಳೀಯರ ಭಾವನೆ, ಯೋಜನೆ ಅನುಷ್ಠಾನದಿಂದ ವನ್ಯಜೀವಿ ಹಾಗೂ ಪರಿಸರದ ಮೇಲಾಗುವ ಪರಿಣಾಮ ಮತ್ತು ರಾಜ್ಯ ಸರ್ಕಾರದ ಮೇಲಾಗುವ ಆರ್ಥಿಕ ಪರಿಣಾಮ ಪ್ರಮುಖವಾದ ಅಂಶಗಳನ್ನು ಪರಿಗಣಿಸಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವದು ಎಂದು ತಿಳಿಸಿದರು.