ಸುಂಟಿಕೊಪ್ಪ, ಜು. 16: ಕೆದಕಲ್ ಗ್ರಾ.ಪಂ. ವ್ಯಾಪ್ತಿಯ 7ನೇ ಮೈಲಿನ ರಾಷ್ಟ್ರೀಯ ಹೆದ್ದಾರಿ ಬಳಿಯ 7 ಮಂದಿ ನಿವಾಸಿಗಳ ಮನೆಯ ಗೋಡೆ ಗಾಳಿ ಮಳೆಯ ಆರ್ಭಟಕ್ಕೆ ಕುಸಿದು ಬಿದ್ದಿದ್ದು ತಾ.ಪಂ. ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಾ.ಪಂ. ಅನುದಾನದ ಲಭ್ಯತೆಗೆ ಅನುಸಾರ ತಡೆಗೋಡೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ.

ಕೆದಕಲ್ ಗ್ರಾ.ಪಂ. ವ್ಯಾಪ್ತಿಯ 7ನೇ ಮೈಲಿನ ನಿವಾಸಿಗಳಾದ ಕೆ.ಹೆಚ್. ಶಿವಣ್ಣ, ನಾರಾಯಣ, ಜಯನಂದ, ರಾಜಣ್ಣ, ಸುಕುಮಾರ, ಹರೀಶ ಎಂಬವರ ಮನೆಗಳು ಗಾಳಿ-ಮಳೆಯಿಂದ ಅಪಾಯದ ಅಂಚಿನಲ್ಲಿದ್ದು ಮಾಹಿತಿ ನೀಡಿದ ಮೇರೆ ಸ್ಥಳಕ್ಕೆ ತೆರಳಿದ ಬಲ್ಲಾರಂಡ ಮಣಿ ಉತ್ತಪ್ಪ ಪರಿಶೀಲನೆ ನಡೆಸಿ ಸೋಮವಾರಪೇಟೆ ತಾ.ಪಂ. ಯೋಜನಾ ಸಮಿತಿ ಸಭೆಯೂ ತಾ. 17 ರಂದು ನಡೆಯಲಿದ್ದು, ಆ ಸಭೆಯಲ್ಲಿ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಲಾಗುವದು, ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಮುಂದೆ ಚತುಷ್ಪಥ ರಸ್ತೆ ನಿರ್ಮಾಣವಾಗುವಾಗ ಪಿಡಬ್ಲ್ಯೂಡಿ ಇಲಾಖೆ ಮನೆಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ ಇಲ್ಲಿನ ನಿವಾಸಿಗಳಿಗೆ ಗ್ರಾ.ಪಂ., ತಾಪಂ., ಜಿ.ಪಂ. ಜಿಲ್ಲಾಡಳಿತ ಸರಕಾರಿ ಪೈಸಾರಿ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡಬೇಕೆಂದು ಅವರು ಒತ್ತಾಯಿಸಿದರು.