ಸೋಮವಾರಪೇಟೆ, ಜು.16: ವಸತಿ ನಿಲಯದಲ್ಲಿರುವ ವಿದ್ಯಾರ್ಥಿ ಗಳಿಗೆ ಸರ್ಕಾರವೂ ನೀಡುವ ಸವಲತ್ತು ಗಳು ಸಕಾಲದಲ್ಲಿ ಸಮರ್ಪಕವಾಗಿ ವಿತರಣೆಯಾಗ ಬೇಕೆಂದು ಕೊಡಗು ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸೋಮವಾರಪೇಟೆ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕಿನ ಸಮಾಜ ಕಲ್ಯಾಣ,ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ವರ್ಗಗಳ ವಸತಿ ನಿಲಯ ನಿರ್ವಹಣೆಯ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಅವರು ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವ ವಿದ್ಯಾರ್ಥಿಗಳಿಗೆ ಯಾವದೇ ಕೊರತೆಯಾಗಬಾರದು, ವಿದ್ಯಾರ್ಥಿಗಳಿಂದ ಜನಪ್ರತಿನಿಧಿಗಳಿಗೆ ದೂರು ಬಾರದಂತೆ ಎಚ್ಚರವಹಿಸ ಬೇಕು. ನಿಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾರ್ಡ್‍ನ್‍ಗಳು, ಅಡಿಗೆಯವರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಯಾವದೇ ಸಮಸ್ಯೆ ಇದ್ದಲ್ಲಿ ನನ್ನೊಂದಿಗೆ ನೇರವಾಗಿ ಚರ್ಚಿಸಬಹುದೆಂದು ಬೋಪಣ್ಣ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ವಿಪರೀತ ಮಳೆ ಇರುವದರಿಂದ ನಿಲಯದಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಸಂಬಂಧಪಟ್ಟ ವಾರ್ಡ್‍ನ್‍ಗಳು, ಅಡಿಗೆಯವರು ವಿಶೇಷ ಗಮನ ಹರಿಸಬೇಕು.ಹಳ್ಳ, ಕೊಳ್ಳ, ನದಿ, ತೋಡು ತುಂಬಿರುವದರಿಂದ ವಿದ್ಯಾರ್ಥಿಗಳು ಆ ಭಾಗಕ್ಕೆ ತೆರಳದಂತೆ ಗಮನ ಹರಿಸಬೇಕು. ನಿಲಯದಲ್ಲಿ ಕುಡಿಯಲು ಬಿಸಿ ಬೀರಿನ ವ್ಯವಸ್ಥೆ ಸದಾ ಇರುವಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದರು.

ಜಿ.ಪಂ. ಸದಸ್ಯರಾದ ದೀಪಕ್, ತಾಲೂಕು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಬಾಲಕೃಷ್ಣರೈ, ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ರಮ್ಯ, ಶ್ರೀಕಾಂತ್, ತಾಲೂಕಿನ ವಸತಿ ನಿಲಯದ ವಾರ್ಡ್‍ನ್‍ಗಳು, ಆಶ್ರಮ ಶಾಲೆಯ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.