ಮಡಿಕೇರಿ, ಜು.18: ಕೊಡಗು ಜಿಲ್ಲೆ ಮಹಾಮಳೆಯಿಂದ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದು, ಜಿಲ್ಲೆಯನ್ನು ಅತಿವೃಷ್ಟಿ ಹಾನಿ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವ ಮೂಲಕ 500 ಕೋಟಿ ರೂ. ಪರಿಹಾರವನ್ನು ನೀಡಬೇಕೆಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ, ಜಿಲ್ಲೆಯ ಜನತೆ ಗಾಳಿ ಮಳೆಯಿಂದಾಗಿ ತತ್ತರಿಸಿ ಹೋಗಿದ್ದು, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಅಪಾರ ಹಾನಿಯಾಗಿದೆ. ರೈತರು, ಬೆಳೆಗಾರರು, ಜನಸಾಮಾನ್ಯರು ನಷ್ಟ ಅನುಭವಿ ಸುತ್ತಿದ್ದು, ಜಿಲ್ಲೆಗೆ ಆಗಮಿಸುವ ಮುಖ್ಯ ಮಂತ್ರಿಗಳು ಇದನ್ನು ಪರಿಗಣಿಸಿ 500 ಕೋಟಿ ರೂ. ವಿಶೇಷ ಅನುದಾನವನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ಕಂದಾಯ ಅಧಿಕಾರಿಗಳು ತರಾತುರಿಯಲ್ಲಿ ಮಳೆಹಾನಿ ನಷ್ಟವನ್ನು ಅಂದಾಜು ಮಾಡಿದ್ದು, ಇಷ್ಟು ಬೇಗ ನಷ್ಟವನ್ನು ನಿಖರವಾಗಿ ತಿಳಿಸಲು ಸಾಧ್ಯವಾಗದ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಅಂದಾಜು ಪಟ್ಟಿಗೆ

(ಮೊದಲ ಪುಟದಿಂದ) ಒಪ್ಪಿಗೆ ಸೂಚಿಸದೆ, ಮಳೆÉಯ ಪ್ರಮಾಣ ಕಡಿಮೆಯಾದ ನಂತರ ಮತ್ತೊಮ್ಮೆ ಸಮಗ್ರ ಮಾಹಿತಿಯನ್ನು ಸಿದ್ಧಪಡಿಸಲು ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಬೇಕೆಂದು ಸುಬ್ರಹ್ಮಣ್ಯ ಉಪಾಧ್ಯಾಯ ಹೇಳಿದರು.

ತೋಟಗಳಿಗೆ, ಕೃಷಿ ಭೂಮಿಗಳಿಗೆ ಅಧಿಕಾರಿಗಳು ತೆರಳಲಾಗದ ಪರಿಸ್ಥಿತಿ ಇದೆ. ಹೀಗಿರುವಾಗ ಮಳೆಹಾನಿ ಪ್ರಮಾಣವನ್ನು ಈಗಲೆ ಅಧಿಕೃತವಾಗಿ ಘೋಷಿಸುವದು ಸರಿಯಲ್ಲವೆಂದರು. ವಿದ್ಯುತ್ ಇಲಾಖೆಗೆ ಹೆಚ್ಚಿನ ನಷ್ಟವಾಗಿದ್ದು, ಸರಿಯಾದ ಮಾಹಿತಿಯನ್ನು ಸಂಗ್ರಹಿಸಿದ ನಂತರವಷ್ಟೆ ಕ್ರೋಢೀಕೃತ ಹಾನಿಯ ಪ್ರಮಾಣವನ್ನು ಘೋಷಿಸಬೇಕೆಂದು ಸುಬ್ರಹ್ಮಣ್ಯ ಉಪಾಧ್ಯಾಯ ಒತ್ತಾಯಿಸಿದರು.

ಅತಿವೃಷ್ಟಿಯಿಂದ ಕೃಷಿ ಕ್ಷೇತ್ರ ಸಂಪೂರ್ಣವಾಗಿ ನಷ್ಟವನ್ನು ಅನುಭವಿಸುತ್ತಿದ್ದು, ರಾಜ್ಯ ಸರ್ಕಾರ ರೈತರ ಸಾಲವನ್ನು ಸಂಪÀÇರ್ಣವಾಗಿ ಮನ್ನಾ ಮಾಡಬೇಕು ಮತ್ತು ಮನೆ ಕಳೆದುಕೊಂಡವರಿಗೆ ಹೊಸ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಬೇಕೆಂದರು.

ಅತಿವೃಷ್ಟಿಯ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವದು ಸ್ವಾಗತಾರ್ಹವಾಗಿದ್ದು, ಜಿ.ಪಂ, ತಾ.ಪಂ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ಮುಖ್ಯಮಂತ್ರಿಗಳಿಗೆ 500 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು.

ಮುಖ್ಯಮಂತ್ರಿಗಳು ಜಿಲ್ಲೆಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸುಬ್ರಹ್ಮಣ್ಯ ಉಪಾಧ್ಯಾಯ, ವಾಣಿಜ್ಯ ಬೆಳೆಗಳ ನಾಶದ ಕುರಿತು ಕೇಂದ್ರದ ಗಮನ ಸೆಳೆಯುವದಾಗಿ ಇದೇ ಸಂದರ್ಭ ತಿಳಿಸಿದರು. ಸಂಸದರು ಅಧಿವೇಶನದಲ್ಲಿ ಇರುವದರಿಂದ ಮಳೆÉಹಾನಿ ಪ್ರದೇಶಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲವೆಂದು ಅವರು ಸಮಜಾಯಿಷಿಕೆ ನೀಡಿದರು.

ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ, ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 200 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದ್ದು, ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳೇ ಇಲ್ಲದ ಪರಿಸ್ಥಿತಿ ಉಂಟಾಗಿದೆ ಎಂದರು.

ಬಿಜೆಪಿ ಮಡಿಕೇರಿ ತಾಲ್ಲೂಕು ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಮಾತನಾಡಿ, ಮಡಿಕೆÉೀರಿ ಕೋಟೆ ಆವರಣದಲ್ಲಿ ಇರುವ ಅರಸರ ಅರಮನೆ ನಿರ್ಲಕ್ಷಿಸಲ್ಪಟ್ಟಿದ್ದು, ಮಳೆಯಿಂದ ಹಾನಿಗೀಡಾಗುತ್ತಿರುವ ಪುರಾತನ ಕಟ್ಟಡವನ್ನು ಸಂರಕ್ಷಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಉಪಸ್ಥಿತರಿದ್ದರು.ಕೊಡಗನ್ನು ಅತಿವೃಷ್ಟಿ ಹಾನಿ ಪೀಡಿತ ಪ್ರದೇಶವೆಂದು ಘೋಷಿಸಲು : ಆಗ್ರಹ