ಕುಶಾಲನಗರ, ಜು 18: ಕುಶಾಲನಗರ ಸಮೀಪ ಮೈಸೂರಿಗೆ ತೆರಳುವ ಹೆದ್ದಾರಿಯಲ್ಲಿ ಬೈಕ್‍ಗೆ ಲಾರಿ ಡಿಕ್ಕಿಯಾದ ಕಾರಣ ದಂಪತಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.

ದೊಡ್ಡಹೊನ್ನೂರು ಗ್ರಾಮದ ಚಂದ್ರೇಗೌಡ, ಪ್ರಭಾವತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೈಲುಕೊಪ್ಪೆ ಕಡೆಯಿಂದ ಕೆಲಸ ಮುಗಿಸಿಕೊಂಡು ಬೈಕ್‍ನಲ್ಲಿ ಬರುತ್ತಿದ್ದ ದಂಪತಿಗಳು ತಮ್ಮ ಗ್ರಾಮಕ್ಕೆ ಹೊನ್ನೂರು ಗೇಟ್ ಬಳಿ ಬೈಕ್ (ಕೆಎ.45.ಆರ್.3424) ತಿರುಗಿಸಿದ ಸಂದರ್ಭ ಹಿಂದಿನಿಂದ ಬಂದ ಗ್ಯಾಸ್ ತುಂಬಿದ ಲಾರಿ (ಕೆಎ.19.943) ಬೈಕ್‍ಗೆ ಡಿಕ್ಕಿಯಾಗಿದೆ. ಈ ಸಂದರ್ಭ ರಸ್ತೆಗೆ ಅಪ್ಪಳಿಸಿದ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸ್ ವೃತ್ತ ನಿರೀಕ್ಷಕ ಸಿದ್ಧಯ್ಯ, ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ಲೋಕೇಶ್, ಸಹಾಯಕ ಠಾಣಾಧಿಕಾರಿ ಪಿ.ಟಿ.ವಿಜಯೇಂದ್ರ ಭೇಟಿ ನೀಡಿ ಮುಂದಿನ ಮಹಜರು ನಡೆಸಿದರು.

ಘಟನೆಗೆ ಸಂಬಂಧಿಸಿದಂತೆ ಬೈಲುಕೊಪ್ಪ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.