ಸೋಮವಾರಪೇಟೆ, ಜು. 20: ಬೆಳೆಗಾರರು ತಮ್ಮ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯು ವಂತಾದಾಗ ಮಾತ್ರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ಕೃಷಿ ಇಲಾಖೆಯ ವತಿಯಿಂದ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಯೋಜನೆಯಡಿಯಲ್ಲಿ ಪಟ್ಟಣದ ಮಹಿಳಾ ಸಮಾಜದಲ್ಲಿ ಹಮ್ಮಿಕೊಂಡಿದ್ದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದೇಶಗಳಲ್ಲಿ ರೈತರು ಬೆಳೆ ಬೆಳೆಯಲು ನಿಬಂಧನೆಗಳಿವೆ, ಯಾರು ಯಾವ ಬೆಳೆ ಬೆಳೆಯುತ್ತೇವೆ ಎಂದು ಮೂರು ವರ್ಷದ ಮೊದಲೇ ಘೋಷಣೆ ಮಾಡುತ್ತಾರೆ. ಆದರೆ ನಮ್ಮ ರಾಷ್ಟ್ರದಲ್ಲಿ ಇಂತಹ ನಿಬಂಧನೆಗಳಿಲ್ಲದೆ ಇರುವದರಿಂದ ಹೆಚ್ಚಿನವರು ಒಂದೇ ಬೆಳೆಯನ್ನು ಬೆಳೆಯುತ್ತಾರೆ. ಹೀಗಾದಾಗ ಬೇಡಿಕೆ ಕಡಿಮೆಯಾಗಿ ಬೆಲೆ ಕುಂಠಿತವಾಗುತ್ತದೆ. ಈ ಬಗ್ಗೆ ಬೆಳೆಗಾರರು ಚಿಂತನೆ ನಡೆಸಬೇಕಾಗಿದೆ ಎಂದರು.

ಪ್ರತಿಯೊಬ್ಬ ಬೆಳೆಗಾರರು ತಮ್ಮ ಕೃಷಿ ಭೂಮಿಯ ಮಣ್ಣನ್ನು ಪರೀಕ್ಷೆಗೊಳಪಡಿಸಿ, ಭೂಮಿಗೆ ಅಗತ್ಯವಾಗಿ ಬೇಕಾದ ಪೋಷಕಾಂಶ ಗಳನ್ನೇ ಗೊಬ್ಬರದ ಮೂಲಕ ನೀಡಿದಾಗ ನಿರೀಕ್ಷಿತ ಪ್ರಮಾಣದ ಬೆಳೆಯನ್ನು ಬೆಳೆದು, ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಕಿವಿಮಾತು ನುಡಿದರು.

ತಾಲೂಕಿನಾದ್ಯಂತ ಸುರಿದ ಭಾರೀ ಮಳೆ-ಗಾಳಿಗೆ ಸುಮಾರು 183 ಮನೆಗಳಿಗೆ ಹಾನಿಯಾಗಿದೆ. ಕೃಷಿ ಭೂಮಿಗಳಿಗೆ ಹಾನಿಯಾಗಿದೆ. ಇದನ್ನೆಲ್ಲಾ ರಾಜ್ಯ ಸರಕಾರ ಪರಿಗಣಿಸಿ ಇಡೀ ಜಿಲ್ಲೆಗೆ ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವದು ಎಂದರು.

ಅಭಿಯಾನದ ಅಂಗವಾಗಿ ಆಯೋಜಿಸಿದ್ದ ವಸ್ತು ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಭಾರೀ ಮಳೆಗೆ ರೈತಾಪಿ ವರ್ಗ ತತ್ತರಿಸಿ ಹೋಗಿದೆ. ಇದನ್ನೆಲ್ಲಾ ನಿರ್ಲಕ್ಷಿಸು ತ್ತಿರುವ ರಾಜ್ಯ ಸರಕಾರ ಬಾಗಿನ ಅರ್ಪಣೆ, ಜಲಪಾತಗಳ ವೀಕ್ಷಣೆ, ತಮಿಳುನಾಡಿಗೆ ನೀರು ಬಿಡುವ ವಿಷಯದಲ್ಲೇ ಮಗ್ನವಾಗಿದೆ ಎಂದು ವ್ಯಂಗ್ಯವಾಡಿದರಲ್ಲದೇ, ರಾಜ್ಯವನ್ನು ಸಮೃದ್ಧವಾಗಿಸಿದ ಹಾಗೂ ತಮಿಳುನಾಡಿಗೆ ನೀರು ಬಿಡುವ ಸಮಸ್ಯೆಯನ್ನು ನೀಗಿಸಿಕೊಟ್ಟ ಕೊಡಗು ಜಿಲ್ಲೆಗೆ ಪರಿಹಾರ ರೂಪದಲ್ಲಿ 1 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಋಣ ತೀರಿಸಲಿ ಎಂದರು.

ಸಹಾಯಕ ಕೃಷಿ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್, ಇಲಾಖೆಯ ತಾಂತ್ರಿಕ ಅಧಿಕಾರಿ ಡಾ. ಎಸ್. ಮುಕುಂದ, ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಪ್ರಭಾಕರ್, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ವೆಂಕಟರಮಣಪ್ಪ, ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕ ಎಂ. ಶಿವಪ್ರಶಾಂತ್, ಕೃಷಿ ಅಧಿಕಾರಿ ನವ್ಯ ನಾಣಯ್ಯರವರುಗಳು ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರುಗಳಾದ ತಂಗಮ್ಮ, ಸವಿತಾ ಈರಪ್ಪ, ಸಬಿತಾ ಚೆನ್ನಕೇಶವ, ಹಾಸನ-ಕೊಡಗು ಜಿಲ್ಲಾ ಸಾವಯವ ಕೃಷಿಕರ ಒಕ್ಕೂಟದ ಉಪಾಧ್ಯಕ್ಷ ಎಂ.ಕೆ. ಮುತ್ತಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಗೀತಾ, ಗ್ರಾ.ಪಂ. ಅಧ್ಯಕ್ಷರುಗಳಾದ ತಿಮ್ಮಯ್ಯ, ರೇಣುಕಾ ವೆಂಕಟೇಶ್ ಉಪಸ್ಥಿತರಿದ್ದರು.