ಮಡಿಕೇರಿ, ಜು.20 : ಉಚಿತ ಬಸ್‍ಪಾಸ್ ಜಾರಿಗಾಗಿ ಆಗ್ರಹಿಸಿ ತಾ.21 ರಂದು (ಇಂದು) ರಾಜ್ಯವ್ಯಾಪಿ ಸ್ವಯಂಪ್ರೇರಿತ ಶಾಲಾ-ಕಾಲೇಜು ಬಂದ್‍ಗೆ ಕರೆ ನೀಡಲಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಸಹಕರಿಸಬೇಕೆಂದು ಎಐಡಿಎಸ್‍ಓ, ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕÀ ಹೆಚ್.ಎಂ.ಬಸವರಾಜು ಮನವಿ ಮಾಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಉಚಿತ ಬಸ್‍ಪಾಸ್ ಜಾರಿಗೊಳಿಸಲು ಸಾರಿಗೆ ಇಲಾಖೆ ಆರ್ಥಿಕ ಹೊರೆಯಾಗುತ್ತದೆ ಎಂದು ಹೇಳುತ್ತಿದೆ. ಉಚಿತ ಬಸ್‍ಪಾಸ್ ಜಾರಿಗೊಳಿಸಲು ಹೆಚ್ಚುವರಿ ರೂ.600 ಕೋಟಿ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಡುವದು ಲಾಭ ಮತ್ತು ವ್ಯಾಪಾರಿ ಮಾನದಂಡದ ಕ್ರಮವಾಗಿದೆ ಎಂದು ಟೀಕಿಸಿದ್ದಾರೆ.

ಗೋಣಿಕೊಪ್ಪ ವರದಿ: ಸರ್ಕಾರ ಉಚಿತ ಬಸ್‍ಪಾಸ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್, ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ ಮತ್ತು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ತಾ. 21 ರಂದು (ಇಂದು) ರಾಜ್ಯಾಧ್ಯಂತ ಶಾಲಾ-ಕಾಲೇಜು ಸ್ವಯಂಪ್ರೇರಿತ ಬಂದ್ ನಡೆಸಬೇಕು ಎಂದು ಕರೆ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ಸಂಘಟನೆಗಳು, ರಾಜ್ಯ ಸರ್ಕಾರ ಉಚಿತ ಬಸ್‍ಪಾಸ್‍ನಿಂದ ಹೊರೆಯಾಗುತ್ತಿದೆ ಎಂದು ಹೇಳುತ್ತಿರುವದು ಸುಳ್ಳು. ಯೋಜನೆ ಜಾರಿಗೆ ಹೆಚ್ಚುವರಿ ರೂ. 600 ಕೋಟಿ ಅವಶ್ಯಕತೆ ಇದೆ ಎಂದು ಹೇಳಿಕೆ ನೀಡುತ್ತಿರುವದು ವ್ಯಾಪಾರಿ ಮಾನದಂಡದಿಂದ ಕೂಡಿದೆ. ಹೆಚ್ಚುವರಿ ಹಣದ ಅವಶ್ಯಕತೆ ಬರುವದಿಲ್ಲ. ಶಿಕ್ಷಣದೊಂದಿಗೆ ಬಸ್‍ಪಾಸ್ ನೀಡುವದು ಕೂಡ ಸರ್ಕಾರದ ಕರ್ತವ್ಯವಾಗಿದೆ. ಜನರಿಂದಲೇ ಕಟ್ಟಲ್ಪಟ್ಟಿರುವ ಸಾರಿಗೆ ಸಂಸ್ಥೆ ಸೇವಾ ಭಾವನೆಯಿಂದಲೇ ಮುಂದುವರಿಯಬೇಕು. ಇದರಿಂದಾಗಿ ಉಚಿತ ಬಸ್‍ಪಾಸ್ ವಿತರಿಸಬೇಕು ಎಂದು ಆಗ್ರಹಿಸಿ ಬಂದ್ ನಡೆಸಲಾಗುವದು ಎಂದು ಆಲ್ ಇಂಡಿಯಾ ಡೆಮಾಕ್ರ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಕೊಡಗು ಜಿಲ್ಲಾ ಅಧ್ಯಕ್ಷ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್, ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ ಮತ್ತು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ಸಂಘಟನೆಗಳ ಸಂಚಾಲಕ ಹೆಚ್. ಎಂ. ಬಸವರಾಜು ಒತ್ತಾಯಿಸಿದ್ದಾರೆ.