ಸೋಮವಾರಪೇಟೆ, ಜು.23: ತಾಲೂಕಿನ ಹರಗ ಗ್ರಾಮದಲ್ಲಿ ಕಳೆದ 25 ದಿನಗಳಿಂದ ಬಿಎಸ್‍ಎನ್‍ಎಲ್ ಮೊಬೈಲ್ ನೆಟ್‍ವರ್ಕ್ ಸ್ಥಗಿತಗೊಂಡಿದ್ದು, ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಇಲ್ಲಿನÀ ಬಿಎಸ್‍ಎನ್‍ಎಲ್ ಎಸ್‍ಡಿಓಟಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಹರಗ ಸಮೀಪದ ಬೆಟ್ಟದಕೊಪ್ಪದಲ್ಲಿ ಅಳವಡಿಸಲಾಗಿರುವ ಟವರ್ ಸ್ಥಗಿತಗೊಂಡಿರುವದರಿಂದ ಹರಗ ವ್ಯಾಪ್ತಿಯ 11 ಗ್ರಾಮಗಳ ಜನರಿಗೆ ತೀವ್ರ ತೊಂದರೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಅನಾಹುತಗಳು ನಡೆಯುತ್ತಿವೆ. ಒಂದೆಡೆ ವಿದ್ಯುತ್ ಕಡಿತಗೊಂಡಿದ್ದು, ಮೊಬೈಲ್ ನೆಟ್‍ವರ್ಕ್ ಸಹ ಇಲ್ಲದಿರುವದರಿಂದ ಸಮಸ್ಯೆ ಬಿಗಡಾಯಿಸಿದ್ದು, ತಾ. 25ರ ಬುಧವಾರದೊಳಗೆ ಸಮಸ್ಯೆ ಪರಿಹರಿಸದಿದ್ದಲ್ಲಿ ತಾ. 26ರಂದು ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವದು ಎಂದು ಎಚ್ಚರಿಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯ ಧರ್ಮಪ್ಪ, ಗರ್ವಾಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳಂಗಪ್ಪ, ಶಾಂತಳ್ಳಿ ಗ್ರಾ.ಪಂ. ಸದಸ್ಯ ತ್ರಿಶೂಲ್, ಗ್ರಾಮಸ್ಥರಾದ ಶರಣ್, ಧರ್ಮರಾಜು, ಕುಶಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.