ಮಡಿಕೇರಿ, ಜು. 24: ಕೊಡಗು ಜಿಲ್ಲೆಗೆ ಹೆಚ್ಚಿನ ವಾಹನಗಳೊಂದಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಿರುವ ಕಾರಣ ಮತ್ತು ನೆರೆಯ ಕೇರಳ ರಾಜ್ಯದೊಂದಿಗೆ ಇತರ ಗಡಿ ಜಿಲ್ಲೆಗಳನ್ನು ಸಂಪರ್ಕಿಸುವ ಮಾರ್ಗವಿರುವ ಹಿನ್ನೆಲೆ, ಅಂತಹ ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದ್ದಾರೆ. ತಾ. 19ರಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಕೊಡಗಿನ ಜನಪ್ರತಿನಿಧಿಗಳ ಪ್ರಸ್ತಾವನೆಗೆ ಮೇಲಿನ ಭರವಸೆ ನೀಡಿದರು.

ಕೇರಳ ಸರಕಾರವು ಕೊಡಗಿನ ಗಡಿ ಮಾಕುಟ್ಟ ವ್ಯಾಪ್ತಿಯ ಕೂಟುಹೊಳೆ ತನಕ ಹೆದ್ದಾರಿ ವಿಸ್ತರಣೆಯೊಂದಿಗೆ, ಹೊಳೆಯ ಮಧ್ಯದವರೆಗೆ ಸೇತುವೆ ಕಾಮಗಾರಿ ಪೂರೈಸಿದ್ದು, ಅರ್ಧಭಾಗದಿಂದ ಕೊಡಗು ಗಡಿಯಲ್ಲಿ ಕಾಮಗಾರಿಗೆ ಅರಣ್ಯಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ ಸೇತುವೆ ನಿರ್ಮಾಣ ತಡೆಹಿಡಿದಿರುವದಾಗಿ ಶಾಸಕ ಕೆ.ಜಿ. ಬೋಪಯ್ಯ ಗಮನ ಸೆಳೆದರು. ಅಲ್ಲದೆ, ಸೇತುವೆ ಕಾಮಗಾರಿ ಅಪೂರ್ಣಗೊಂಡಿದ್ದು, ಹಳೆಯ ಬ್ರಿಟಿಷರ ಕಾಲದ ಕಿರಿದಾದ ಸೇತುವೆ ಉಭಯ ರಾಜ್ಯಗಳ ನಡುವೆ ಭಾರೀ ವಾಹನಗಳ ಸಂಚಾರಕ್ಕೆ ತೊಡ ಕಾಗಿರುವ ಬಗ್ಗೆ ಸಾಕಷ್ಟು ದೂರುಗಳಿವೆ ಎಂದು ಉಲ್ಲೇಖಿಸಿದರು. ಈ ವೇಳೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಲೋಕೋಪ ಯೋಗಿ ಸಚಿವ ಹೆಚ್.ಡಿ. ರೇವಣ್ಣ ಸಂಬಂಧಿಸಿದ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಯಾವದೇ ರಸ್ತೆ

(ಮೊದಲ ಪುಟದಿಂದ) ಅಥವಾ ಸಾರ್ವಜನಿಕ ಉಪಯೋಗಕ್ಕಾಗಿ ನಿರ್ಮಿಸುವ ಸೇತುವೆಗಳಿಗೆ ಅಡ್ಡಿಪಡಿಸ ದಂತೆ ತಾಕೀತು ಮಾಡಿದರು.

ಈ ಸಂಬಂಧ ಕಾನೂನಿನ ತೊಡಕುಗಳನ್ನು ನಿವಾರಿಸÀಲು ಕೊಡಗು ಮತ್ತು ಕಣ್ಣೂರು ಜಿಲ್ಲಾಧಿಕಾರಿಗಳ ಸಹಿತ ಬೆಂಗಳೂರಿನಲ್ಲಿ ಉನ್ನತಮಟ್ಟದ ಸಭೆ ನಡೆಸಿ ಕೇಂದ್ರ ರಸ್ತೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಪರಿಹಾರ ಕಂಡುಕೊಳ್ಳಲಾಗುವದು ಎಂದು ಆಶ್ವಾಸನೆ ನೀಡಿದರು.

ಕಡಮಕಲ್ ರಸ್ತೆಗೆ ಆದ್ಯತೆ: ಕೊಡಗು ಜಿಲ್ಲಾ ಕೇಂದ್ರದಿಂದ ನೂರಾರು ಕಿ.ಮೀ. ಬಳಸುದಾರಿಯಲ್ಲಿ ಸುಳ್ಯ ಮುಖಾಂತರ ಸಂಚರಿಸುವ ಬದಲಿಗೆ, ಮಡಿಕೇರಿ- ಕಡಮಕಲ್ ರಸ್ತೆಯನ್ನು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸಲು 25ರಿಂದ 30 ಕಿ.ಮೀ. ವ್ಯಾಪ್ತಿಯಲ್ಲಿ ಸಾಧ್ಯವಾಗಲಿದೆ ಎಂದು ಬೊಟ್ಟು ಮಾಡಿದ ಸಚಿವ ರೇವಣ್ಣ, ಈ ಬಗ್ಗೆಯೂ ಅಗತ್ಯ ಕ್ರಮದ ಭರವಸೆಯಿತ್ತರು.

ಈ ಹೆದ್ದಾರಿಗೆ ಕೆಲವರು ಪರಿಸರವಾದಿಗಳ ಹೆಸರಿನಲ್ಲಿ ಜನಪ್ರತಿನಿಧಿಗಳ ಸಹಿತ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಕುರಿತು ಉಲ್ಲೇಖಿಸಿದ ಸಚಿವರು, ಅಭಿವೃದ್ಧಿಗೆ ಅಡ್ಡಿಯುಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು. ಅಲ್ಲದೆ, ಸೋಮವಾರಪೇಟೆ ಮುಖಾಂತರ ಸುಬ್ರಹ್ಮಣ್ಯ ಸಂಪರ್ಕ ರಸ್ತೆಗೂ ಅವಕಾಶ ಮಾಡಿಕೊಡಲಾಗುವದು ಎಂದರು.

ಕೇಂದ್ರ ಸರಕಾರದ ಸಹಯೋಗ ದಿಂದ ಮೇಲಿನ ರಸ್ತೆಗಳೊಂದಿಗೆ ಪಾಣತ್ತೂರು, ಕರಿಕೆ, ಭಾಗಮಂಡಲ, ಮಡಿಕೇರಿ ಹೆದ್ದಾರಿ ಅಭಿವೃದ್ಧಿಗೆ ಆದ್ಯತೆ ನೀಡಲಾಗು ವದಲ್ಲದೆ, ಮೈಸೂರು- ಮಾಣಿ - ಬಂಟ್ವಾಳ ಹೆದ್ದಾರಿಗೆ ಮಡಿಕೇರಿ, ಕುಶಾಲನಗರ ಒಳಗೊಂಡು ಅಭಿವೃದ್ಧಿಗೊಳಿಸಲಾಗುವದು ಎಂದು ನುಡಿದರು. ಜಿಲ್ಲೆಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಿರುವಾಗ ಇಂತಹ ಮಳೆಗಾಲದ ನಡುವೆ ಕೊಡಗಿನ ರಸ್ತೆಗಳನ್ನು ಅಭಿವೃದ್ಧಿಗೊಳಿಸದಿದ್ದರೆ, ಜಿಲ್ಲೆಯ ಜನರು ಸಂಕಷ್ಟ ಅನುಭವಿಸುತ್ತಾರೆ ಎಂದು ರೇವಣ್ಣ ವಿಷಾದಿಸಿದರು.

ಹೀಗಾಗಿ ಭವಿಷ್ಯದಲ್ಲಿ ಬೆಂಗಳೂರು- ಮೈಸೂರು ನಡುವೆ ದಶಪಥದ ಮಾರ್ಗಗಳು ರೂಪು ಗೊಳ್ಳುವಾಗ, ಪ್ರವಾಸಿ ಜಿಲ್ಲೆ ಕೊಡಗಿನ ಪ್ರಮುಖ ಹೆದ್ದಾರಿಗಳನ್ನು ಚತುಷ್ಪದ ಮಾರ್ಗ ರೂಪಿಸಲು ತ್ವರಿತ ಕ್ರಮದ ಅಗತ್ಯವಿದೆ ಎಂದು ನೆನಪಿಸಿದರು. ಆ ಮೂಲಕ ಕೊಡಗಿನ ಮುಖ್ಯರಸ್ತೆಗಳಿಗೆ ಹಂತ ಹಂತವಾಗಿ ಕಾಯಕಲ್ಪ ನೀಡಲು ಸರಕಾರ ಬದ್ಧವೆಂದು ಘೋಷಿಸಿದರು.

ಪ್ರಸಕ್ತ ನಿರಂತರ ಜಲಾವೃತ ಗೊಂಡು ಕ್ಷೇತ್ರಕ್ಕೆ ಬಂದು ಹೋಗುವ ಯಾತ್ರಾರ್ಥಿಗಳ ಸಹಿತ ಆ ಭಾಗದ ಗ್ರಾಮೀಣ ಜನತೆ ಸಂಕಟಪಡುತ್ತಿರುವ, ತಲಕಾವೇರಿ- ಭಾಗಮಂಡಲ ಕ್ಷೇತ್ರದ ಸಂಪರ್ಕ ಸಾಧಿಸಲು, ಮೇಲ್ಸೇತುವೆ ಯೋಜನೆಯ ಶೀಘ್ರ ಅನುಷ್ಠಾನ ಗೊಳಿಸುವ ಬಗ್ಗೆಯೂ ಸಚಿವರು ಉಲ್ಲೇಖಿಸಿದರು.

ಅಲ್ಲದೆ, ಮುಂಗಾರು ಗಾಳಿ - ಮಳೆಯಿಂದ ಯಾವದೇ ಮಾರ್ಗದಲ್ಲಿ ಅಪಾಯವಿದ್ದರೂ ಅಂತಹ ಮರಗಳನ್ನು ತ್ವರಿತ ತೆರವುಗೊಳಿಸಿ ಸಾರ್ವಜನಿಕ ಆಸ್ತಿ- ಪಾಸ್ತಿ ಹಾನಿಗೊಳ್ಳದಂತೆ ನಿಗಾವಹಿಸುವಂತೆ ಜಿಲ್ಲಾಡಳಿತಕ್ಕೆ ತಾಕೀತು ಮಾಡಲಾಯಿತು.