ಸೋಮವಾರಪೇಟೆ, ಜು. 24: ಮನೆ ಮಾಲೀಕರು ಆಸ್ಪತ್ರೆಗೆ ತೆರಳಿದ ಬಗ್ಗೆ ಮಾಹಿತಿ ಪಡೆದ ಕಳ್ಳರು ಮನೆಯ ಬೀಗ ಮುರಿದು ಸಾವಿರಾರು ರೂಪಾಯಿ ನಗದು ಹಾಗೂ 35 ಗ್ರಾಂ ಚಿನ್ನದ ಆಭರಣ ಕಳವು ಮಾಡಿರುವ ಘಟನೆ ಸಮೀಪದ ಗರಗಂದೂರು ಬಿ. ಗ್ರಾಮದಲ್ಲಿ ನಡೆದಿದೆ.

ಗರಗಂದೂರು ಬಿ. ಗ್ರಾಮದ ತೋಟಂಬೈಲು ಸೋಮಣ್ಣ ಅವರ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಸಾಧಿಸಿದ ಕಳ್ಳರು ಬೀಗ ಮುರಿದು ಒಳನುಗ್ಗಿ, ರೂ. 25 ಸಾವಿರ ನಗದು ಹಾಗೂ 35 ಗ್ರಾಂ ಚಿನ್ನಾಭರಣವನ್ನು ದೋಚಿದ್ದಾರೆ.

ಇತ್ತೀಚೆಗಷ್ಟೇ ಸೋಮಣ್ಣ ಅವರ ಪತ್ನಿಯ ಮೇಲೆ ಸಿಲ್ವರ್ ಮರ ಬಿದ್ದು, ಗಂಭೀರ ಸ್ಥಿತಿಗೆ ತಲುಪಿದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿಯೇ ಇರುವ ಪತ್ನಿಯನ್ನು ನೋಡಲೆಂದು ನಿನ್ನೆ ದಿನ ಸೋಮಣ್ಣ ಅವರು ಮಂಗಳೂರಿಗೆ ತೆರಳಿದ್ದು, ಇತ್ತ ಕಳ್ಳತನ ನಡೆದಿದೆ.

ಈ ಬಗ್ಗೆ ಸುಂಟಿಕೊಪ್ಪ ಠಾಣೆಗೆ ದೂರು ನೀಡಲಾಗಿದ್ದು, ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿ ಜಯರಾಂ, ಸಿಬ್ಬಂದಿಗಳಾದ ಖಾದರ್, ಸುಧೀಶ್ ಅವರುಗಳು ತೆರಳಿ ಪರಿಶೀಲಿಸಿದ್ದಾರೆ. ಇದರೊಂದಿಗೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ತಪಾಸಣೆ ನಡೆಸಿದೆ.