ಸೋಮವಾರಪೇಟೆ, ಜು. 24: ತಾಲೂಕಿನ ಜೇನುಕಲ್ಲುಬೆಟ್ಟ ಅರಣ್ಯ ಪ್ರದೇಶದ ಚಿನ್ನೇನಹಳ್ಳಿ ಗಡಿಯಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಉರುಳಿಗೆ ಸಿಲುಕಿದ ಮುಳ್ಳುಹಂದಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಟಿವಿಎಸ್ ವಾಹನದಲ್ಲಿ ಮುಳ್ಳುಹಂದಿಯನ್ನು ಸಾಗಿಸುತ್ತಿದ್ದ ಚಿನ್ನೇನಹಳ್ಳಿ ಗ್ರಾಮದ ಹನುಮಂತರೆಡ್ಡಿ ಅವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ವನ್ಯಜೀವಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಉಪ ವಲಯಾರಣ್ಯಾಧಿಕಾರಿ ಚಂದ್ರೇಶ್, ಅರಣ್ಯ ರಕ್ಷಕರಾದ ಪ್ರಮೋದ್, ಚಾಲಕ ಚಂದ್ರನ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.