ಚೆಟ್ಟಳ್ಳಿ, ಜು. 23: ಮೂರ್ನಾಡಿನ ವಿದ್ಯಾಸಂಸ್ಥೆ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಪ್ರಥಮ ವರ್ಷದ ಕಾಲ್ಚೆಂಡು ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಯೂತ್ ಫಾರ್ ಜಸ್ಟೀಸ್ ಸುಂಟಿಕೊಪ್ಪ ಪಡೆದುಕೊಂಡಿದೆ. ದ್ವಿತೀಯ ಸ್ಥಾನವನ್ನು ಯಂಗ್ ಇಂಡಿಯಾ ಪಾಲಿಬೆಟ್ಟ, ತೃತೀಯ ಸ್ಥಾನವನ್ನು ಅಮ್ಮತ್ತಿ ಎಫ್.ಸಿ ಹಾಗೂ ನಾಲ್ಕನೇ ಸ್ಥಾನವನ್ನು ಕಬಡಕ್ಕೇರಿ ತಂಡ ತನ್ನದಾಗಿಸಿಕೊಂಡಿದೆ.ಮೊದಲನೇ ಸೆಮಿಫೈನಲ್ ಪಂದ್ಯವು ಯೂತ್ ಫಾರ್ ಜಸ್ಟೀಸ್ ಹಾಗೂ ಕಬಡಕ್ಕೇರಿ ತಂಡಗಳ ನಡುವೆ ನಡೆಯಿತು. ಸುಂಟಿಕೊಪ್ಪ ತಂಡವು 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿತು. ಎರಡನೇ ಸೆಮಿಫೈನಲ್ ಪಂದ್ಯವ ಅಮ್ಮತ್ತಿ ಎಫ್.ಸಿ ತಂಡವನ್ನು ಪಾಲಿಬೆಟ್ಟ ತಂಡವು 2-1 ಗೋಲುಗಳ ಅಂತರದಿಂದ ಸೋಲಿಸಿತು.

ಫೈನಲ್ ಪಂದ್ಯವು ಎರಡು ಬಲಿಷ್ಠ ತಂಡಗಳಾದ ಯೂತ್ ಫಾರ್ ಜಸ್ಟೀಸ್ ಹಾಗೂ ಯಂಗ್ ಇಂಡಿಯಾ ಪಾಲಿಬೆಟ್ಟ ತಂಡಗಳ ನಡುವೆ ನಡೆದು, ಅಬೂಬಕರ್ ಅವರ ಏಕೈಕ ಗೋಲಿನ ನೆರವಿನಿಂದ ಪ್ರಥಮ ವರ್ಷದ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದ ಪ್ರಥಮ ಸ್ಥಾನವನ್ನು ಸುಂಟಿಕೊಪ್ಪ ತಂಡವು ತನ್ನದಾಗಿಸಿತು.

ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಕಬಡಕ್ಕೇರಿ ತಂಡವನ್ನು ಮಣಿಸಿ ಅಮ್ಮತ್ತಿ

(ಮೊದಲ ಪುಟದಿಂದ) ಎಫ್.ಸಿ ತಂಡವು ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.

ಪಂದ್ಯಾಟದ ಉತ್ತಮ ತಂಡವಾಗಿ ಎನ್.ವೈ.ಸಿ ಚಾಮಿಯಾಲ, ಉತ್ತಮ ಆಟಗಾರನಾಗಿ ಸುಂಟಿಕೊಪ್ಪ ತಂಡದ ಅಬೂಬಕರ್, ಉತ್ತಮ ಗೋಲ್ ಕೀಪರ್ ಬಹುಮಾನವನ್ನು ನಾಸೀರ್ ಪಡೆದುಕೊಂಡರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಮುಸ್ಲಿಂ ಕಾಲ್ಚೆಂಡು ಪಂದ್ಯಾಟದ ಸಂಸ್ಥಾಪಕ ಆಶಿಫ್ ವಹಿಸಿದ್ದರು.

ವೇದಿಕೆಯಲ್ಲಿ ಕರೀಂ ಬಾಯಿ ವ್ಯವಸ್ಥಾಪಕರು ಅರಬ್ ಕಮಿಟಿ, ಅಬ್ದುಲ್ ರಶೀದ್ ಎಡಪಾಲ, ದೈಹಿಕ ಶಿಕ್ಷಕಿ ಪುಷ್ಪ ಕುಮಾರಿ, ಮೂರ್ನಾಡು ಗ್ರಾ.ಪಂ. ಸದಸ್ಯ ಎಂ.ಎಂ. ಸಾದಿಕ್ ಖಲೀಲ್, ಅಬ್ದುಲ್ ರೆಹಮಾನ್, ಸೈಫ್ ಆಲಿ, ಜಾಸೀರ್ ಕೆ.ಜಿ., ಅನ್ಸಾಫ್, ಎನ್.ಯಿ. ಖಾಲೀದ್, ವೀಕ್ಷಕ ವಿವರಣೆಯನ್ನು ಅಮ್ಮತ್ತಿಯ ಆಸಿಫ್ ನೆರವೇರಿಸಿದರು.

ಸನ್ಮಾನ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಭಾರತ ತಂಡದ ಸಬ್ ಜೂನಿಯರ್ ತಂಡವನ್ನು ಪ್ರತಿನಿಧಿಸಿದ ಫಾಹಿದ್, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿ ಮುಖ್ಯ ಮಂತ್ರಿಗಳ ಗಮನ ಸೆಳೆದ ಕಾಳೇರ ಫತಾಹ್, ದೈಹಿಕ ಶಿಕ್ಷಕಿಯಾಗಿ ಸುದೀರ್ಘ ವರ್ಷ ಕಾರ್ಯನಿರ್ವಹಿಸಿದ ಪುಷ್ಪ ಕುಮಾರಿ ಅವರನ್ನು ಸನ್ಮಾನ ಮಾಡಲಾಯಿತು.