ಮಡಿಕೇರಿ, ಜು.24 : ಭಾಗಮಂಡಲ ಸಮೀಪದ ಚೇರಂಗಾಲ ಗ್ರಾಮದಲ್ಲಿರುವ ಕಾವೇರಿಯ ಮೂಲ ಸ್ಥಾನದಲ್ಲಿ ಸುಮಾರು 12 ಕೋಟಿ ರೂ.ವೆಚ್ಚದಲ್ಲಿ ದೇವಾಲಯ ನಿರ್ಮಿಸಲು ಶ್ರೀ ಕನ್ನಿಕಾವೇರಿ ಸೇವಾ ಟ್ರಸ್ಟ್ ನಿರ್ಧರಿಸಿದೆ ಎಂದು ಟ್ರಸ್ಟ್‍ನ ಸಂಚಾಲಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೇರಂಗಾಲ ಗ್ರಾಮದ ಹೊಸೂರು ಎಂಬಲ್ಲಿ ಕಾವೇರಿಯ ಮೂಲ ಸ್ಥಾನವಿದ್ದು, ಈ ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ 7 ದಶಕಗಳಿಂದ ಹೊಸೂರು ನಾಣಯ್ಯ ದಂಪತಿ ಪ್ರಯತ್ನಿಸಿದ್ದರೂ, ಅದು ಕಾರ್ಯ ರೂಪಕ್ಕೆ ಬಂದಿಲ್ಲ. ಇದೀಗ ಈ ಕ್ಷೇತ್ರದ ಅಭಿವೃದ್ಧಿಗಾಗಿ ಜಿಲ್ಲೆಯ ವಿವಿಧೆಡೆಯ ಸಮಾನ ಮನಸ್ಕರನ್ನು ಸೇರಿಸಿ ಟ್ರಸ್ಟ್ ಒಂದನ್ನು ರಚಿಸಲಾಗಿದೆ ಎಂದರು.ಚೇರಂಗಾಲದಲ್ಲಿರುವ ಕಾವೇರಿಯ ಮೂಲ ಸ್ಥಾನದಲ್ಲಿ ವಿಷ್ಣು, ಮಹೇಶ್ವರ, ಸುಬ್ರಹ್ಮಣ್ಯ, ಭದ್ರಕಾಳಿ, ಗುಳಿಗ, ವಾಯು ರಕ್ಷಕ ಪೊದ ದೇವರ ಸ್ಥಾನಗಳಿದ್ದು, ಅವುಗಳು ಈಗ ಜೀರ್ಣಗೊಂಡಿವೆ. ಅವುಗಳನ್ನು ಜೀರ್ಣೋದ್ಧಾರ ಮಾಡಬೇಕೆಂಬದು ಹಲವಾರು ಪ್ರಶ್ನೆ, ಸುವರ್ಣ ಪ್ರಶ್ನೆಗಳಲ್ಲಿ ಕಂಡು ಬಂದಿದ್ದು, ಕಾವೇರಿ ನೀರನ್ನು ಕುಡಿಯುವ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಬೇಕೆಂದು ಗೋಚರಿಸಿದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಕೊಡಗು ಮಾತ್ರವಲ್ಲದೆ, ಕೊಡಗಿನ ಹೊರ ಭಾಗದಲ್ಲಿರುವ (ಮೊದಲ ಪುಟದಿಂದ) ಕಾವೇರಿಯ ನೀರನ್ನು ಬಳಕೆ ಮಾಡುವವರಿಂದಲೂ ದೇಣಿಗೆ ಸಂಗ್ರಹಿಸಿ ಹಾಗೂ ಸರಕಾರದ ನೆರವಿನಿಂದ ಈ ದೇವಾಲಯವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಹೇಳಿದರು. ಈ ಕ್ಷೇತ್ರವು ಕವೇರ ಮುನಿಯ ತಪಸ್ಸನ್ನು ಮೆಚ್ಚಿ ಬ್ರಹ್ಮದೇವನು ಕವೇರ ಮುನಿಯನ್ನು ಸಂತೈಸುವ ಸಲುವಾಗಿ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನು ಕೊಟ್ಟ ಸ್ಥಳವೆಂದು ಹೇಳಲಾಗಿದ್ದು, ಆ ಬಳಿಕ ಅಗಸ್ತ್ಯರನ್ನು ವರಿಸಿದ ಕಾವೇರಿ ಅಗಸ್ತ್ಯರೊಂದಿಗೆ ಮುನಿಸಿಕೊಂಡು ಮಾಯವಾದ ಸ್ಥಳ ಈಗಿನ ತಲಕಾವೇರಿಯಾಗಿದೆ ಎಂದು ಶಂಕರಿಪೊನ್ನಪ್ಪ ತಿಳಿಸಿದರು.

ಈ ಕ್ಷೇತ್ರದ ಪಾವಿತ್ರ್ಯತೆ ಹಾಗೂ ವಿಶೇಷತೆಯನ್ನು ಪ್ರತ್ಯಕ್ಷ ವೀಕ್ಷಿಸುವದರಿಂದ ಮಾತ್ರ ಅರಿಯಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ಟ್ರಸ್ಟ್ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟಿದೆ. ಹೊಸೂರು ನಾಣಯ್ಯ ಅವರ ಅಧೀನದಲ್ಲಿದ್ದ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಅವರು ಜಾಗವನ್ನು ಟ್ರಸ್ಟ್‍ಗೆ ನೀಡಿದ್ದು, ಅಲ್ಲಿ ನಾಣಯ್ಯ ಅವರ ಹೆಸರಿನಲ್ಲಿ ಸೇವಾಶ್ರಮವೊಂದನ್ನು ಆರಂಭಿಸುವ ಉದ್ದೇಶವೂ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಅಧ್ಯಕ್ಷ ಚೇಂದಂಡ ಚುಮ್ಮಿ ಪೂವಯ್ಯ, ಕಾರ್ಯದರ್ಶಿ ಪುಚ್ಚಿಮಂಡ ಬಬ್ಲು ಅಪ್ಪಯ್ಯ, ಟ್ರಸ್ಟಿಗಳಾದ ಪಟ್ರಪಂಡ ನಾಣಯ್ಯ ಹಾಗೂ ಚೇಂದ್ರಿಮಾಡ ದರ್ಶನ್ ಹಾಜರಿದ್ದರು.