ಶ್ರೀಮಂಗಲ, ಜು. 23: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಆಗಸ್ಟ್ 6 ರಂದು ದ.ಕೊಡಗಿನ ಕಾನೂರಿನಲ್ಲಿ “ಬೇಲ್ ನಮ್ಮೆ -2018” ನಡೆಸಲು ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಲ್ ನಮ್ಮೆ ಕಾರ್ಯಕ್ರಮಕ್ಕೆ ಕಾನೂರು ಕೊಡವ ಸಮಾಜ, ಕೋತೂರು ಅಮ್ಮ ಕೊಡವ ಸಮಾಜ, ಕಾನೂರು-ಕೋತೂರು ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆಸಲು ತೀರ್ಮಾನಿಸಲಾಯಿತು.ಬೇಲ್ ನಮ್ಮೆ ಕಾರ್ಯಕ್ರಮವು ಕಾನೂರಿನ (ಮೊದಲ ಪುಟದಿಂದ) ಮನ್ನಕ್ಕಮನೆ ಕಿರಣ್- ವಾಸು ಅವರ ಗದ್ದೆಯಲ್ಲಿ ನಡೆಸಲು ಹಾಗೂ ಈ ಕಾರ್ಯಕ್ರಮದಲ್ಲಿ ಹಲವು ಪೈಪೋಟಿ ಅಲ್ಲದೆ, ಸಾಂಪ್ರದಾಯಿಕ ಊಟೋಪಚಾರ ಆಯೋಜಿಸಲಾಗಿದೆ.ಪೈಪೋಟಿ ಮಹಿಳೆಯರಿಗೆ ಅಗೆ ಪೆರಿಪೊ (ಪೈರು ತೆಗೆಯುವದು), ಪುರುಷರಿಗೆ ನಾಟಿ ನಡ್‍ಪೊ(ಪೈರು ನೆಡುವುದು), ಮಹಿಳೆಯರು ಹಾಗೂ ಪುರುಷರಿಗೆ ನಾಟಿ ಬೇಲ್ ಓಟ (ಕೆಸರು ಗದ್ದೆ ಓಟ), ಕೊಡಿ ನಾಟಿ (ಧಾರೆ ನಾಟಿ), ಕೇರ್ ಬಲಿಪೊ(ಹಗ್ಗಜಗ್ಗಾಟ), ಅಲ್ಲದೆ, ಈ ಸಂದರ್ಭ ವಿಚಾರ ಗೋಷ್ಠಿ, ಒಯ್ಯಪಾಟ್ ಹಾಗೂ ಇತ್ಯಾದಿ ಕಾರ್ಯಕ್ರಮವಿರುತ್ತದೆ.

ಪೈಪೋಟಿಯಲ್ಲಿ ಪ್ರಾಥಮಿಕ ಶಾಲೆ ವಿಭಾಗ, ಪ್ರೌಢಶಾಲೆ - ಪಿಯುಸಿ ವಿಭಾಗ, ಕಾಲೇಜು-ಸಾರ್ವಜನಿಕ ವಿಭಾಗ ಎಂದು ಮೂರು ವಿಭಾಗದಲ್ಲಿ ನಡೆಯಲಿದೆ. ಹಗ್ಗಜಗ್ಗಾಟದಲ್ಲಿ ಮಹಿಳೆಯರು ಹಾಗೂ ಪುರುಷರಿಗಾಗಿ ಕಾಲೇಜು ಹಾಗೂ ಸಾರ್ವಜನಿಕ ವಿಭಾಗ ಎಂದು ಎರಡು ವಿಭಾಗವಿರುತ್ತದೆ ಎಂದು ಅಧ್ಯಕ್ಷ ಪೊನ್ನಪ್ಪ ತಿಳಿಸಿದರು.

ಇಂದಿನ ಸಭೆಯಲ್ಲಿ ಕಾನೂರು ಕೊಡವ ಸಮಾಜದ ಅಧ್ಯಕ್ಷ ಮಚ್ಚಮಾಡ ಕಂದಾ ಭೀಮಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಸುಳ್ಳಿಮಾಡ ದಿನು ಚಿಣ್ಣಪ್ಪ, ಅಕಾಡೆಮಿ ಸದಸ್ಯರುಗಳಾದ ಸುಳ್ಳಿಮಾಡ ಭವಾನಿ ಕಾವೇರಿಯಪ್ಪ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಆಪಟ್ಟೀರ ಟಾಟು ಮೊಣ್ಣಪ್ಪ ಭಾಗವಹಿಸಿದ್ದರು.