ಹೆಬ್ಬಾಲೆ, ಜು. 24: ಇಲ್ಲಿನ ಹೆಬ್ಬಾಲೆ ಬಸ್ ನಿಲ್ದಾಣ ಬಳಿ ಇರುವ ಲಕ್ಷ್ಮೀ ಜ್ಯೂವೆಲ್ಲರಿ ಹಾಗೂ ಬ್ಯಾಂಕರ್ಸ್ ಅಂಗಡಿಗೆ ಸೋಮವಾರ ರಾತ್ರಿ ಕಳ್ಳರ ಗುಂಪೊಂದು ಕಳವಿಗೆ ಯತ್ನಿಸಿ ವಿಫಲವಾಗಿದೆ.

ಹೆಬ್ಬಾಲೆ ನಿವಾಸಿ ರಾಜಸ್ಥಾನ ಮೂಲದ ಮೋಹನ್ ಚೌದರಿ ಎಂಬವರಿಗೆ ಸೇರಿದ ಚಿನ್ನಾಭರಣ ಅಂಗಡಿಗೆ ಕನ್ನ ಹಾಕಲು ಕಳ್ಳರ ಗುಂಪೊಂದು ಅಂಗಡಿಯ ಹಿಂದಿನ ಬಾಗಿಲಿನಿಂದ ನುಗ್ಗಲು ಯತ್ನಿಸುತ್ತಿರುವ ಸಂದರ್ಭ ಚೌದರಿ ಮಗ ವಿನೋದ ಅಲ್ಲಿಗೆ ಆಗಮಿಸಿದ್ದಾನೆ. ಈ ಸಂದರ್ಭ ಕಳ್ಳರು ಬ್ಲೇಡಿನಿಂದ ವಿನೋದ್ ಕುತ್ತಿಗೆಗೆ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ವಿದ್ಯುತ್ ಇಲ್ಲದ ಹಿನ್ನೆಲೆ ಕಳ್ಳರ ಸುಳಿವು ಸಿಕ್ಕಿಲ್ಲ. ಈ ಕುರಿತು ಮೋಹನ್ ಚೌದರಿ ನೀಡಿದ ದೂರಿನ ಮೇರೆಗೆ ಕೂಡ್ಲೂರು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್ ಗೌಡ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.