ಮಡಿಕೇರಿ, ಜು. 24: ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಮಾದಾಪುರದ ಜಂಬೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ 350 ಎಕರೆ ಭೂಮಿಯಿದ್ದು, ಇಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬೇಡಿಕೆ ಸಲ್ಲಿಸಿದ್ದಾರೆ.

ತಾ. 19 ರಂದು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಮುಖ್ಯಮಂತ್ರಿ ಗಳಿಗೆ ಲಿಖಿತ ಮನವಿ ಸಲ್ಲಿಸಿದ ಶಾಸಕರು, ತೋಟಗಾರಿಕಾ ಇಲಾಖೆಯ ವಿಶಾಲ ಜಾಗದಲ್ಲಿ ಕೃಷಿ ವಿವಿಗೆ ಸೂಕ್ತ ಅನುಕೂಲ ಇದೆ ಎಂದು ಗಮನ ಸೆಳೆದಿದ್ದಾರೆ. ಮಾತ್ರವಲ್ಲದೆ ಇತರ ಪ್ರಮುಖ ಪ್ರಸ್ತಾವನೆಗಳನ್ನು ಮುಂದಿಟ್ಟು ಅವರು ಮುಖ್ಯಮಂತ್ರಿ ಮುಖಾಂತರ ಸರಕಾರದ ಗಮನ ಸೆಳೆದಿದ್ದಾರೆ.

ಹೊಳೆನರಸಿಪುರ-ಅರಕಲಗೋಡು, ಸೋಮವಾರಪೇಟೆ-ವೀರಾಜಪೇಟೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಈಗಾಗಲೇ ಕ್ರಿಯಾಯೋಜನೆ ಆಗಿದ್ದು, ಈ ರಸ್ತೆಯು ಸೋಮವಾರಪೇಟೆ-ಮಡಿಕೇರಿ-ವೀರಾಜಪೇಟೆ 3 ತಾಲೂಕುಗಳನ್ನು ಹಾದು ಹೋಗುವದ ರಿಂದ ಈ ವ್ಯಾಪ್ತಿಯ ಜನತೆಗೆ ತುಂಬಾ ಅನುಕೂಲವಾಗುವದರಿಂದ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಅಗಲೀಕರಣಕ್ಕೆ ಅನುಧಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಶಾಸಕ ಅಪ್ಪಚ್ಚು ರಂಜನ್ ಕೋರಿದ್ದಾರೆ. ಕೊಡಗು ಜಿಲ್ಲೆಯಲ್ಲಿನ ಹೆಚ್ಚಿನ ರಸ್ತೆಗಳು ಮತ್ತು ಸೇತುವೆಗಳು ಇತ್ತೀಚೆಗೆ ಬಿದ್ದ ಮಳೆಯಿಂದ ಹಾನಿಯಾಗಿರು ವದರಿಂದ ವಿಶೇಷವಾಗಿ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಒಂದು ಸಾವಿರ ಕೋಟಿ ಅನುದಾನ ನೀಡುವಂತೆ ಆಗ್ರಹಪೂರ್ವಕ ಬೇಡಿಕೆ ಸಲ್ಲಿಸಿದ್ದಾರೆ.

ಕೊಡಗಿನ ರೈತರು ಈಗಾಗಲೇ ಕಾಫಿ ಮತ್ತು ಕರಿಮೆಣಸಿನ ಬೆಲೆಯು ಕಡಿಮೆಯಾಗಿದ್ದ ಪರಿಣಾಮ ಕಂಗಾಲಾಗಿದ್ದು ಚೇತರಿಸಿಕೊಳ್ಳಲು ಶ್ರಮಿಸುತ್ತಿರುವ ಬೆನ್ನಲೇ; ಈಗ ಬಿದ್ದ ಮಳೆಯಿಂದ ಕಾಫಿ ಮತ್ತು ಕರಿಮೆಣಸು ಸಂಪೂರ್ಣ ನಾಶ ಹೊಂದುತ್ತಿದ್ದು, ರೈತರು ಜೀವನ ನಡೆಸುವದೇ ದುಸ್ತರವಾಗಿದೆ. ಆದ್ದರಿಂದ ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡಬೇಕು ಎಂದು ತಿಳಿಸಿದರು.

ಕೂಡಿಗೆಯಲ್ಲಿ ಈ ಹಿಂದೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಮಿನಿ ವಿಮಾನ ನಿಲ್ದಾಣಕ್ಕೆ ಜಾಗವನ್ನು ಗುರುತಿಸಿರುವ ದರಿಂದ ಈ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ಮಂಜೂರು ಮಾಡಬೇಕಾಗಿ ಕೋರಿದರು. ಕೊಡಗಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ರೈತರ ಜಮೀನಿನಲ್ಲಿ ಬೆಳೆದ ಬೆಳೆ ನಷ್ಟವಾಗುವದೇ ಅಲ್ಲದೆ ರೈತರ ಮೇಲೆ ಆಗಿಂದಾಗ್ಗೆ ಧಾಳಿ ನಡೆಸುತ್ತಿರುವದರಿಂದ ಕಾಡಾನೆ ತಡೆಗೆ ಕಂದಕ ನಿರ್ಮಾಣ, ಇಲ್ಲವೇ ಸೋಲಾರ್ ನಿರ್ಮಾಣ ಮಾಡಲು ಶಾಶ್ವತ ಕ್ರಮವಹಿಸಬೇಕು ಎಂದರು.

ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಡುಗೆಯವರು ಮತ್ತು ಅಡುಗೆ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚಿಗೆ ಈ ಹುದ್ದೆಗಳಿಗೆ ಸರ್ಕಾರದಿಂದ ಹೊಸದಾಗಿ ಸಿಬ್ಬಂದಿಗಳನ್ನು ನೇಮಿಸಿದ್ದರಿಂದ, ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಇಂತವರಿಗೆ ತಾತ್ಕಾಲಿಕ ಸಿಬ್ಬಂದಿಗಳನ್ನು ನೇಮಕ ಮಾಡಲು ಕ್ರಮವಹಿಸಬೇಕೆಂದು ಅಪ್ಪಚ್ಚುರಂಜನ್ ಪತ್ರದಲ್ಲಿ ಕೋರಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಡೆಯುವ ದಸರಾ ಉತ್ಸವಕ್ಕೆ ಮೈಸೂರಿಗೆ ನೀಡುವಂತೆ ವಿಶೇಷ ಅನುದಾನವನ್ನು ಮೀಸಲಿಡಬೇಕು ಎಂದು ಗಮನ ಸೆಳೆದಿರುವ ಶಾಸಕರು, ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಬಿಡುಗಡೆಗೆ ಕೋರಿದ್ದಾರೆ.

ರೈತರ ಪ್ರಮುಖ ಬೇಡಿಕೆಯಾದ ಜಮ್ಮಾ ಹಕ್ಕು ಯೋಜನೆಯನ್ನು ಜಾರಿಗೆ ತರುವ ಮೂಲಕ ಕಂದಾಯ ಭೂಮಿಯನ್ನಾಗಿ ಪರಿವರ್ತಿಸಬೇಕು ಎಂದು ತಿಳಿಸಿದ ಅವರು, ಜಿಲ್ಲೆಗೆ ರಾಜ್ಯ, ರಾಷ್ಟ್ರ ಅಲ್ಲದೆ ಅಂತರ್ರಾಷ್ಟ್ರೀಯ ಮಟ್ಟದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದು ಜಿಲ್ಲೆಯ ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿ ಪಡಿಸಿ ಮೂಲಭೂತ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ವೈದ್ಯರ ಕೊರತೆ ಸೇರಿದಂತೆ ಜಿಲ್ಲೆಯ ಸರ್ಕಾರಿ ಇಲಾಖೆಗಳಲ್ಲಿ ಶೇ.50 ಕ್ಕಿಂತಲೂ ಹೆಚ್ಚು ಸಿಬ್ಬಂದಿಗಳ ಕೊರತೆ ಇರುವದರಿಂದ ಸರ್ಕಾರಿ ಕೆಲಸಗಳು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಆಗದೆ ತೊಂದರೆಯಾಗಿ ರುವದರಿಂದ ಸರ್ಕಾರಿ ಕಚೇರಿಯಲ್ಲಿನ ಸಿಬ್ಬಂದಿಗಳ ನೇಮಕಾತಿ ಮಾಡಬೇಕು ಎಂದು ಗಮನ ಸೆಳೆದಿದ್ದಾರೆ. ಮಡಿಕೇರಿಯ ರಾಜರ ಕೋಟೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಇತರೆ ಕಚೇರಿಗಳು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಂದ ಜಿಲ್ಲಾಧಿಕಾರಿಗಳ ಹೊಸ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿದ್ದು, ಇನ್ನು ಕೆಲವೇ ಕಚೇರಿಗಳು ಮಾತ್ರ ಕೋಟೆಯಲ್ಲಿದ್ದು, ಇಲ್ಲಿನ ಕೋಟೆಯು ಮಳೆಯಿಂದ ಶಿಥಿಲಗೊಳ್ಳುತ್ತಿದ್ದು ತ್ವರಿತವಾಗಿ ದುರಸ್ತಿಪಡಿಸಿದ್ದಲ್ಲಿ ಪುರಾತನವಾದ ಕೋಟೆಯು ಉಳಿಯುವದರಿಂದ ದುರಸ್ತಿಗೆ ವಿಶೇಷ ಅನುದಾನ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.