ಮೂರ್ನಾಡು, ಜು. 26: ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹೊಮ್ಮಿಸಲು ಸಾಂಸ್ಕøತಿಕ ಸಂಘಗಳ ಅವಶ್ಯಕತೆ ಇದೆ ಎಂದು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಬಡುವಂಡ ಸೀತಾದೇವಿ ಹೇಳಿದರು.

ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಾಂಸ್ಕøತಿಕ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ವಿಶೇಷ ಪ್ರತಿಭೆಗಳನ್ನು ಕಂಡುಕೊಂಡು ವೇದಿಕೆಗಳ ಮೂಲಕ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದ್ಯಾಸಂಸ್ಥೆಯ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮಾತನಾಡಿ, ಕೇವಲ ಪಠ್ಯವೊಂದೇ ವಿದ್ಯೆ ಅಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ವಿಶಾಲ ಮನೋಭಾವ ಬೆಳೆಯುತ್ತದೆ. ಸಂಘಗಳ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವಂತಾಗಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪಟ್ಟಡ ಪೂವಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅದಮ್ಯ ತುಡಿತ, ಆಸಕ್ತಿಯಿಂದ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿ ಗಳು ತಮ್ಮ ಪ್ರತಿಭೆಯನ್ನು ಕಂಡು ಕೊಂಡು ಅದೇ ಹಾದಿಯಲ್ಲಿ ಸಾಗಿದರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು. ಕಾಲೇಜಿನ ಅಭಿವೃದ್ಧಿಗೆ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕ ವೃಂದ ಹಾಗೂ ಆಡಳಿತ ಮಂಡಳಿ ಕಾಲೇಜಿನ ರಾಯಭಾರಿಗಳಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ದಂಬೆಕೋಡಿ ಸುಶೀಲ, ನಂದೇಟಿರ ರಾಜ ಮಾದಪ್ಪ, ಪಳಂಗಂಡ ವಿಠಲ ಪೂವಯ್ಯ, ಈರಮಂಡ ಸೋಮಣ್ಣ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಬಿ.ಎನ್. ಮಮತ, ಸೌಮ್ಯ, ರಶ್ಮಿ, ರೋಹಿಣಿ, ಉಮ್ಮತ್ತಾಟ್ ತರಬೇತುದಾರರಾದ ಪಾಂಡಂಡ ಸ್ವಾತಿ ಗಣಪತಿ, ಗ್ರೇಸಿ ಪೂಣಚ್ಚ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು, ಉಪನ್ಯಾಸಕರು, ಅತಿಥಿಗಳಿಂದ ಹಾಡುಗಾರಿಕೆ ಮತ್ತು ನೃತ್ಯ ಪ್ರದರ್ಶನ ಜರುಗಿದವು. ಸಾಂಸ್ಕøತಿಕ ಸಂಘದ ಸಂಚಾಲಕಿ ಶಾರದ ಸ್ವಾಗತಿಸಿ, ಪ್ರಾದ್ಯಾಪಕಿ ಕಲ್ಪನ ವಂದಿಸಿದರು.