ಮಡಿಕೇರಿ, ಜು.26: ಕ್ಲಬ್ ಮಹೀಂದ್ರ, ಕೊಡವ ಟ್ರಸ್ಟ್ ಮತ್ತು ನಾಲ್ಗುಡಿ ಸಂಸ್ಥೆ ವತಿಯಿಂದ ಸೂರ್ಲಬ್ಬಿಯ ಸರ್ಕಾರಿ ಪ್ರಾಥಮಿಕ ಶಾಲೆಯ 29 ಮತ್ತು ಪ್ರೌಢಶಾಲೆಯ 15 ಒಟ್ಟು 44 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್, ಕೊಡೆ ಹಾಗೂ ಶಾಲೆಗೆ ಬಕೇಟ್, ಕುಕ್ಕರ್ ಮತ್ತಿತರ ಸಾಮಗ್ರಿಗಳನ್ನು ವಿತರಿಸಲಾಯಿತು.

ನಾಲ್ಗುಡಿ ಸಂಸ್ಥೆಯ ಚಾಮೇರ ದಿನೇಶ್ ಮಾತನಾಡಿ ಕುಗ್ರಾಮವಾದ ಸೂರ್ಲಬ್ಬಿ, ಗರ್ವಾಲೆ, ಮಂಕ್ಯ, ಕಿಕ್ಕರಹಳ್ಳಿ, ಕುಂಬಾರಗಡಿಗೆ ಗ್ರಾಮಗಳು ಆಧುನಿಕ ಯುಗದಲ್ಲೂ ಸಹ ಇಲ್ಲಿನ ವಿದ್ಯಾರ್ಥಿಗಳು ಪ್ರತಿನಿತ್ಯ 8-10 ಕಿ.ಮೀ. ನಡೆದು ಶಾಲೆಗೆ ಬರುತ್ತಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ಮಾಡಬೇಕಿದೆ. ಜೊತೆಗೆ ವಿದ್ಯಾರ್ಥಿ ನಿಲಯ ಆಗಬೇಕಿದೆ ಎಂದು ಕೋರಿದರು.

ಕ್ಲಬ್ ಮಹೀಂದ್ರದ ವ್ಯವಸ್ಥಾಪಕರಾದ ಸ್ವಪನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಛಲ ಮತ್ತು ಗುರಿ ಇದ್ದಾಗ ಸಾಧನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು.

ಕೆ.ನಿಡುಗಣೆ ಗ್ರಾ.ಪಂ.ವ್ಯಾಪ್ತಿಯ ಕೆ.ಬಾಡಗ, ಹೆಬ್ಬೆಟ್ಟಗೇರಿ, ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್, ರೇನ್‍ಕೋಟ್ ಮತ್ತಿತರ ಶಾಲಾ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದರು.

ಕೊಡವ ಟ್ರಸ್ಟ್ ಅಧ್ಯಕ್ಷ ತಮ್ಮುಪೂವಯ್ಯ ಮಾತನಾಡಿ ಸೂರ್ಲಬ್ಬಿ ಭಾಗದಲ್ಲಿ ವಿದ್ಯುತ್ ಸಮಸ್ಯೆ ನಿರಂತರವಾಗಿ ಇರುವದರಿಂದ ಸೂರ್ಲಬ್ಬಿ ಶಾಲೆಗೆ ಜನರೇಟ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಬ್ಯಾಟರಿ ಸಹ ಇದ್ದು, ಇದನ್ನು ಬಳಸಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.

ಟ್ರಸ್ಟ್‍ನ ಸದಸ್ಯ ಪ್ರಮೋದ್ ಸೋಮಯ್ಯ ಮಾತನಾಡಿ ವಿದ್ಯಾರ್ಥಿಗಳು ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ಪೋಷಕರು ಸಹ ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಎಂದರು.

ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕೆÀ್ಷ ನೇತ್ರ ಮಾತನಾಡಿ ಸೂರ್ಲಬ್ಬಿ ಶಾಲೆಗೆ ಎಸ್‍ಎಸ್‍ಎಲ್‍ಸಿ. ಪರೀಕ್ಷೆಯಲ್ಲಿ ಶೇ.60ರಷ್ಟು ಫಲಿತಾಂಶ ಬಂದಿದ್ದು, ಶೇ.100 ರಷ್ಟು ಫಲಿತಾಂಶ ಪಡೆಯುವಂತಾಗಬೇಕು. ಆ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುವಂತಾಗಬೇಕು ಎಂದು ಹೇಳಿದರು.

ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಗೆ ಹಲವಾರು ದಾನಿಗಳು ಸಹಕಾರ ನೀಡಿದ್ದಾರೆ. ಆ ನಿಟ್ಟಿನಲ್ಲಿ ಅಡುಗೆ ಸ್ಟವ್, ವಾಟರ್ ಫಿಲ್ಟರ್, ಹಾಟ್ ಬಾಕ್ಸ್, ಮ್ಯಾಟ್‍ನ್ನು ದಾನಿಗಳು ಒದಗಿಸಬೇಕು ಎಂದು ಅವರು ಕೋರಿದರು.

ಸದಸ್ಯರಾದ ಮುತ್ತಣ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರವಿ ಇತರರು ಇದ್ದರು. ಸೂರ್ಲಬ್ಬಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶ್ ನಾಯಕ್ ನಿರೂಪಿಸಿದರು. ಶಿಕ್ಷಕರಾದ ಪೂವಯ್ಯ ಅವರು ಸ್ವಾಗತಿಸಿದರು. ಕ್ಲಬ್ ಮಹೀಂದ್ರದ ಸಿಬ್ಬಂದಿಗಳು ಇದ್ದರು.