ಮಡಿಕೇರಿ, ಜು. 25: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೋಂಸ್ಟೇಯೊಂದರಲ್ಲಿ ನಿನ್ನೆ ಬೆಳಿಗ್ಗೆ ಕಳ್ಳತನ ನಡೆದಿದ್ದು, ಪೊಲೀಸರಿಗೆ ಈ ಬಗ್ಗೆ ಪುಕಾರಾಗಿದೆ. ಮದೆನಾಡು ಮಸೀದಿಯಿಂದ ಮುಂದೆ ಬರುವ ಕಿರಣ್ ಎಂಬವರಿಗೆ ಸೇರಿದ ಹೋಂಸ್ಟೇಯಲ್ಲಿ ನಿನ್ನೆ ಬೆಳಿಗ್ಗೆ 9ರಿಂದ ಅಪರಾಹ್ನ 1ರ ಸಮಯದಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ಬೀರು ಒಡೆದಿರುವ ಕಳ್ಳರು 32 ಗ್ರಾಂ ಚಿನ್ನ ಹಾಗೂ ರೂ. 20 ಸಾವಿರ ನಗದು ಹಣ ಅಪಹರಿಸಿದ್ದಾರೆ. ಈ ಬಗ್ಗೆ ಮಾಲೀಕರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿ ಮನೆಯಲ್ಲಿ ಕಳವು

ಶನಿವಾರಸಂತೆಯಲ್ಲಿ ಅಲ್ಲಿನ ಜಾನುವಾರು ಅಧಿಕಾರಿಯೊಬ್ಬರ ನಿವಾಸಕ್ಕೆ ನಿನ್ನೆ ಯಾರೂ ಇಲ್ಲದ ಸಮಯದಲ್ಲಿ ನುಗ್ಗಿರುವ ಕಳ್ಳರು ಚಿನ್ನಾಭರಣ ಹಾಗೂ ನಗದು ಅಪಹರಿಸಿದ್ದಾರೆ.

ಜಾನುವಾರು ಅಧಿಕಾರಿ ಚಂದ್ರಶೇಖರ್ ಅವರ ಮನೆಯಲ್ಲಿ ನಿನ್ನೆ ರಾತ್ರಿ ಕಳವು ನಡೆದಿದೆ. ಮನೆಯ ಕಪಾಟು ಮುರಿದು ಚೆಲ್ಲಾಪಿಲ್ಲಿ ಮಾಡಿರುವ ಕಳ್ಳರು 25 ಗ್ರಾಂ ಚಿನ್ನ ಹಾಗೂ 15 ಸಾವಿರ ನಗದು ಅಪಹರಿಸಿರುವ ಕುರಿತು ಪೊಲೀಸರಿಗೆ ಪುಕಾರಾಗಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳÀಚ್ಚು ತಜ್ಞರು ತೆರಳಿ ಪರಿಶೀಲಿಸಿದ್ದು, ಪೊಲೀಸ್ ತನಿಖೆ ಮುಂದುವರೆಯುತ್ತಿದೆ.