ಮಡಿಕೇರಿ, ಜು. 26: ನಗರದಿಂದ ಮಂಗಳೂರು ಹೆದ್ದಾರಿಯ ಕಾಟಕೇರಿಯಲ್ಲಿ ಕಳೆದ ರಾತ್ರಿ ಭೂ ಕುಸಿದಿರುವ ಬೆನ್ನಲ್ಲೇ ಗಾಳಿಬೀಡು-ಕಾಲೂರು ಮಾರ್ಗದಲ್ಲಿ ಹತ್ತಾರು ಕಡೆ ಸರಣಿ ಭೂಕುಸಿತ ಸಂಭವಿಸಿದೆ. ಪರಿಣಾಮ ಇಂದು ಅರ್ಧ ದಾರಿ ತನಕ ಮಾತ್ರ ಬಸ್ ತೆರಳುವದರೊಂದಿಗೆ ಸಂಜೆ ಶಾಲಾ - ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಪಾಟಿ ಎಂಬಲ್ಲಿ ಇಳಿಸಿ ಹಿಂತಿರುಗಿದೆ.

ಅಲ್ಲಿಂದ ಗ್ರಾಮಸ್ಥರು ಬಳಸು ದಾರಿಯಲ್ಲಿ ತಮ್ಮ ತಮ್ಮ ಮಕ್ಕಳನ್ನು ಬಾಡಿಗೆಗೆ ಜೀಪು ಇತ್ಯಾದಿ ಹೊಂದಿಕೊಂಡು ಮನೆಗಳಿಗೆ ಕರೆದೊಯ್ದಿದ್ದಾರೆ. ವಿಷಯ ತಿಳಿದು ಕಾಲೂರು ಗ್ರಾಮದವರೇ ಆಗಿರುವ ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಅವರು ಖುದ್ದು ಭೇಟಿ ನೀಡಿ ತಮ್ಮ ಹುಟ್ಟೂರಿನಲ್ಲಿ ಸಂಭವಿಸಿರುವ ಸರಣಿ ಭೂಕುಸಿತದ ಬಗ್ಗೆ ಮರುಕ ವ್ಯಕ್ತಪಡಿಸಿದರು.

ಅಲ್ಲದೆ, ಈ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರ ಗಮನ ಸೆಳೆದು ರಸ್ತೆ ಸರಿಪಡಿಸಲು ಅಗತ್ಯ ಗಮನ ಹರಿಸುವದಾಗಿ ಗ್ರಾಮಸ್ಥರೊಂದಿಗೆ ಭರವಸೆ ನೀಡಿದರು. ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ, ಬಿಜೆಪಿಯ ಯುವ ಮೋರ್ಚಾ ಖಜಾಂಚಿ ಕೆ.ಜಿ. ಕೀರ್ತನ್ ಈ ಸಂದರ್ಭ ಹಾಜರಿದ್ದರು.