ನಾಪೆÇೀಕ್ಲು, ಜು. 25: ತುಂತುರು ಮಳೆ, ನಡುಗುವ ಚಳಿ, ಮೈತುಂಬಾ ಕೆಸರು, ಕೇಕೆ, ಬೊಬ್ಬೆಯೊಂದಿಗೆ ತಮ್ಮೆಲ್ಲಾ ಒತ್ತಡ, ಜಂಜಾಟವನ್ನು ಮರೆತು ಪತ್ರಕರ್ತರು ಸಂಭ್ರಮಿಸಿದ ಘಟನೆ ನಾಪೆÇೀಕ್ಲು ಸಮೀಪದ ಕೊಳಕೇರಿ ಗ್ರಾಮದ ಬಿದ್ದಾಟಂಡ ದಿ. ದೇವಯ್ಯ ಅವರ ಗದ್ದೆಯಲ್ಲಿ ನಡೆಯಿತು.

ಜಿಲ್ಲಾ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸ ಲಾಗಿದ್ದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಕೆಸರಿನಲ್ಲಿ ಕೆಸರಾಗಿ, ನೀರಿನಲ್ಲಿ ನೀರಾಗಿ, ಎದ್ದು ಬಿದ್ದು, ಓಡಿ ಕುಣಿದು, ಕುಪ್ಪಳಿಸಿ, ಕೇಕೆ ಹಾಕಿ, ಒಬ್ಬರನ್ನೊಬ್ಬರು ಆಲಂಗಿಸಿ, ಹಿರಿಯರು, ಕಿರಿಯರು ಎಂಬ ಬೇಧವಿಲ್ಲದೆ ಪತ್ರಕರ್ತರು ನಾವೆಲ್ಲರೂ ಒಂದು ಎಂಬ ಒಗ್ಗಟ್ಟನ್ನು ಪ್ರದರ್ಶಿಸಿ ರಂಜಿಸಿದರು.

ಕೆಲವರು ಒಬ್ಬರಿಗೊಬ್ಬರು ಕೆಸರನ್ನು ಎರಚುತ್ತಿದ್ದರೆ, ಮತ್ತೆ ಕೆಲವರು ಕುಳಿತವರ ಮೇಲೆಯೇ ಕೆಸರಿನ ಗೋಪುರ, ಸನ್ಯಾಸಿಯ ಜೆಡೆ, ಗಡ್ಡಗಳನ್ನು ರಚಿಸಿ ಸಂಭ್ರಮಿಸುತ್ತಿದ್ದುದು ಕಂಡು ಬಂತು.

ಕ್ರೀಡಾಕೂಟದಲ್ಲಿ ಓಟ, ಹ್ಯಾಂಡ್ ಬಾಲ್, ಹಗ್ಗಜಗ್ಗಾಟ ಸ್ಪರ್ಧೆಗಳನ್ನು ನಡೆಸಲಾಯಿತು. ವರ್ಷ ಪೂರ್ತಿ ತಮ್ಮ ವೃತ್ತಿ ಬದುಕಿನ ಜಂಜಾಟದಲ್ಲಿ, ಒತ್ತಡದಲ್ಲಿ ದಿನಕಳೆಯುತ್ತಿರುವ ಪತ್ರಕರ್ತರು, ಈ ಕ್ರೀಡಾಕೂಟದಲ್ಲಿ ಗೂಡಿನಿಂದ ಬಿಟ್ಟ ಹಕ್ಕಿಯಂತೆ ಸ್ವಚ್ಛಂದವಾಗಿ ವಿಹರಿಸಿದರು.

ಆ. 5ರಂದು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆಯುತ್ತಿದ್ದರೂ, ಅದನ್ನು ಲೆಕ್ಕಿಸದೆ, ಚಿಂತಿಸದೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೂ ಕೂಡ ಸಂತೋಷದಿಂದ ಭಾಗವಹಿಸಿದ್ದುದು ವಿಶೇಷವಾಗಿತ್ತು.

ಕ್ರೀಡಾಕೂಟವನ್ನು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಬಿದ್ದಾಟಂಡ ಬಿ. ಮುತ್ತಣ್ಣ ಉದ್ಘಾಟಿಸಿದರು. ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಕೊಡಗು ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ, ನಾಪೋಕ್ಲು ಗ್ರಾಪಂ ಸದಸ್ಯೆ ಪುಲ್ಲೇರ ಪದ್ಮಿನಿ, ಸ್ಥಳೀಯರಾದ ಸೋಮಯ್ಯ ಮತ್ತಿತರರು ಹಾಜರಿದ್ದರು.

ಸಮಾರೋಪ : ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬೆಳೆಗಾರ ಬಿ.ಟಿ. ಕಾರ್ಯಪ್ಪ, ವೀರಾಜಪೇಟೆ ಉದ್ಯಮಿ ಚುಪ್ಪ ನಾಗರಾಜು, ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರೆಸ್‍ಕ್ಲಬ್ ಉಪಾಧ್ಯಕ್ಷ ವಿಘ್ನೇಶ್ ಎಂ. ಭೂತನಕಾಡು, ಖಜಾಂಚಿ ರೆಜಿತ್ ಕುಮಾರ್ ಗುಹ್ಯ, ಸಂಘಟನಾ ಕಾರ್ಯದರ್ಶಿ ಎಂ.ಎ. ಅಜೀಜ್ ಮತ್ತಿತರರು ಹಾಜರಿದ್ದರು.

ವಿಜೇತರ ವಿವರ : ನಾಟಿ ಓಟ ಸ್ಪರ್ಧೆಯಲ್ಲಿ ಉದಯ್ ಮೊಣ್ಣಪ್ಪ(ಪ್ರ), ಅಜಿತ್ ನಾಣಯ್ಯ(ದ್ವಿ), ದಿವಾಕರ್(ತೃ) ಬಹುಮಾನ ಪಡೆದುಕೊಂಡರು. ಕೆಸರುಗದ್ದೆಯಲ್ಲಿ ನಡೆದ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಡಿಕೇರಿ ಯಂಗ್ ಸ್ಪೈಡರ್ಸ್ ತಂಡದಲ್ಲಿ ಆದರ್ಶ್, ನವೀನ್ ಡಿಸೋಜ, ವಿನೋದ್, ಇಸ್ಮಾಯಿಲ್ ಕಂಡಕರೆ, ವಿಘ್ನೇಶ್ ಎಂ. ಭೂತನಕಾಡು, ರೋಹಿತ್ ಹಾಗೂ ದ್ವಿತೀಯ ಸ್ಥಾನ ಪಡೆದ ವೀರಾಜಪೇಟೆ ಟೈಗರ್ಸ್ ತಂಡದಲ್ಲಿ ನಾಯಕ ಪಾರ್ಥಚಿಣ್ಣಪ್ಪ, ಹೇಮಂತ್ ಕುಮಾರ್, ಅಜ್ಜಮಾಡ ರಮೇಶ್ ಕುಟ್ಟಪ್ಪ, ಟಿ.ಎನ್. ಮಂಜುನಾಥ್, ಲೋಹಿತ್ ಗೌಡ, ರವಿಕುಮಾರ್, ಡಿ.ಪಿ. ರಾಜೇಶ್ ಪಾಲ್ಗೊಂಡಿದ್ದರು.

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಆದರ್ಶ್, ಅಜಿತ್ ನಾಣಯ್ಯ, ಬೊಳ್ಳಜಿರ ಅಯ್ಯಪ್ಪ, ವಿನೋದ್, ನವೀನ್ ಡಿಸೋಜ, ರೋಹಿತ್, ಲೋಕೇಶ್ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡದಲ್ಲಿ ವೀರಾಜಪೇಟೆ ಟೈಗರ್ಸ್ ತಂಡದಲ್ಲಿ ನಾಯಕ ಪಾರ್ಥಚಿಣ್ಣಪ್ಪ, ಹೇಮಂತ್ ಕುಮಾರ್, ಎಂ.ಎನ್. ನಾಸೀರ್, ಟಿ.ಎನ್. ಮಂಜುನಾಥ್, ಲೋಹಿತ್ ಗೌಡ, ರವಿಕುಮಾರ್, ಡಿ.ಪಿ. ರಾಜೇಶ್ ಪಾಲ್ಗೊಂಡಿದ್ದರು.