ವೀರಾಜಪೇಟೆ, ಜು. 26: ವೀರಾಜಪೇಟೆಯ ಸಿದ್ದಾಪುರ ರಸ್ತೆಯಿಂದ ಮಲೆತಿರಿಕೆ ಬೆಟ್ಟದ ಈಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ದುಸ್ಥಿತಿಯಲ್ಲಿದ್ದು, ಲೋಕೋಪಯೋಗಿ ಇಲಾಖೆಯಿಂದ ಇದನ್ನು ತಕ್ಷಣ ದುರಸ್ತಿಪಡಿಸುವಂತೆ ಇಲ್ಲಿನ ಸಮಾಜ ಸೇವಕರಾದ ಬಾಳುಗೋಡು ಗ್ರಾಮದ ಎನ್.ಸಿ. ವಿಜಯಕುಮಾರ್ ಅವರು ಲೋಕೋಪಯೋಗಿ ಸಚಿವ ರೇವಣ್ಣ ಅವರಿಗೆ ಮಡಿಕೇರಿಯಲ್ಲಿ ಖುದ್ದು ಮನವಿ ಸಲ್ಲಿಸಿದ್ದಾರೆ.

ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಇತಿಹಾಸ ಪ್ರಸಿದ್ಧ ಪ್ರತಿಷ್ಠಿತ ಈಶ್ವರ ದೇವಾಲಯದಲ್ಲಿ ಆಗಿಂದಾಗ್ಗೆ ಉತ್ಸವ ಹಬ್ಬ-ಹರಿದಿನಗಳು ನಡೆಯುತ್ತಿದ್ದು, ಭಕ್ತಾದಿಗಳಿಗೆ ರಸ್ತೆಯ ದುರಸ್ತಿಯಿಂದಾಗಿ ದೇವಾಲಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ದೇವಾಲಯಕ್ಕೆ ವಾಹನದಲ್ಲಿ ಹೋಗಿ ಬರಲು ಎರಡು ಲಘು ವಾಹನಗಳಿಗೆ ಅವಕಾಶವಿದೆ. ರಸ್ತೆ ಕಾಮಗಾರಿಗೆ ಜಾಗವೂ ಇದೆ. ಜೊತೆಗೆ ಮಲೆತಿರಿಕೆ ಬೆಟ್ಟದ ಮೇಲಿನ ಸುತ್ತಮುತ್ತಲ ಪ್ರದೇಶದಲ್ಲಿ ಬಡವರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಈ ಕುಟುಂಬಗಳಿಗೂ ಈ ರಸ್ತೆ ಉಪಯೋಗವಾಗುತ್ತದೆ ಎಂದು ಸಚಿವರಿಗೆ ಮನವಿಯಲ್ಲಿ ತಿಳಿಸಲಾಗಿದೆ.

ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ವಿಜಯಕುಮಾರ್ ತಿಳಿಸಿದ್ದಾರೆ.