ಮಡಿಕೇರಿ, ಜು. 30: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ದಿ. ಎಂ.ಜಿ. ಪದ್ಮನಾಭ ಕಾಮತ್ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಗಿಡಕ್ಕೆ ನೀರೆರೆಯುವ ಮುಖೇನ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಾಲೆಗಳಲ್ಲಿ ಪಾಠ ಪ್ರವಚನ ಸಂದರ್ಭ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲ. ಕರ್ನಾಟಕದಲ್ಲಿದ್ದಕೊಂಡೇ ಕನ್ನಡ ಭಾಷೆಯ ಮೇಲೆ ತಾತ್ಸರ ಮನೋಭಾವವಿದೆ. ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳಿಗೆ ಪ್ರಾಮುಖ್ಯತೆ ನೀಡಿ ಸವಲತ್ತುಗಳನ್ನು ನೀಡಬೇಕು ಎಂದು ಹೇಳಿದರು.

ಕನ್ನಡದ ಉಳಿವಿಗಾಗಿ, ನಾಡಿನ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಕನ್ನಡದ ಏಳಿಗೆಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ದತ್ತಿ ದಾನಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿದ್ದ ಎಂ.ಪಿ. ಕೇಶವಕಾಮತ್ ಮಾತನಾಡಿ ಕನ್ನಡವನ್ನು ನಮ್ಮ ಮನೆಯಲ್ಲಿ ಬಳಸಿಕೊಂಡರೆ ಕನ್ನಡಕ್ಕೆ ಸಾವಿಲ್ಲ, ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಶಾಲಾ ಕಾಲೇಜುಗಳಲ್ಲಿ ಆಯೋಜಿಸುವದರ ಮೂಲ ಉದ್ದೇಶ ಇಂದಿನ ಮಕ್ಕಳಿಗೆ ಸಾಹಿತ್ಯವನ್ನು ಪರಿಚಯಿಸುವದು ಹಾಗೂ ಸಾಹಿತ್ಯಕ್ಕೋಸ್ಕರ ನಮ್ಮ ಹಿಂದಿನ ತಲೆಮಾರಿನವರ ಸಾಹಿತ್ಯ ಸೇವೆಯ ಅರಿವನ್ನು ಮೂಡಿಸುವದಾಗಿದೆ ಎಂದು ಹೇಳಿದರು.

ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ; ಶಿಕ್ಷಣದಲ್ಲಿ ಕನ್ನಡ ಭಾಷೆ ಬಳಕೆಯಾದರೆ ಮಾತ್ರ ಕನ್ನಡವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಾನವೀಯತೆಗಳನ್ನು ವಿಶಾಲಗೊಳಿಸುವದು ಒಂದು ಭಾಷೆ. ಎಲ್ಲಾ ಸೋದರ ಭಾಷೆಗಳನ್ನು ಒಳಗೊಂಡಿರುವ ಕನ್ನಡ ಭಾಷೆ ನೆಲಕಚ್ಚುತ್ತಿದೆ ಎಂಬ ಭಾವನೆ ಬೇಡ. ಕನ್ನಡ ಭಾಷೆಯನ್ನು ಗಟ್ಟಿಗೊಳಿಸಬೇಕಾದರೆ ಅನ್ಯ ಭಾಷಿಕರೊಂದಿಗೆ ಕನ್ನಡವನ್ನು ಬಳಸಬೇಕು, ಶಾಲಾ ಕಾಲೇಜು ಆವರಣದಲ್ಲಿ ಕನ್ನಡದಲ್ಲೇ ಮಾತನಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾವೇರಿ ಕಾಲೇಜಿನ ಪ್ರಾಧ್ಯಾಪಕ ಪ್ರೋ ಮಾಳೇಟಿರ ಕಾವೇರಪ್ಪ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ ಬೆಳವಣಿಗೆಗೆ ವಾಣಿಜ್ಯೋದ್ಯಮಿಗಳ ಕೊಡುಗೆ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡುತ್ತಾ ಸಂಸ್ಕøತಿಗಳು ಗಟ್ಟಿಯಾಗಿ ಉಳಿಯಬೇಕಾದರೆ ತಾಯಂದಿರಿಂದ ಮಾತ್ರ ಸಾಧ್ಯ. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಅಳಿಯಲು ಸಾಧ್ಯವಿಲ್ಲ. ಕನ್ನಡ ಭಾಷೆಯನ್ನು ಬಳಸುವದರ ಮೂಲಕ ಮುಂದಿನ ತಲೆಮಾರಿಗೆ ಹಸ್ತಾಂತರವಾಗಬೇಕು. ಕನ್ನಡದ ಬಗ್ಗೆ ಮನೋದಾರಿದ್ರ್ಯ ಎಲ್ಲಿಯತನಕ ಇರುತ್ತದೆ ಅಲ್ಲಿಯವರೆಗೆ ಕನ್ನಡವನ್ನು ಗಟ್ಟಿಗೊಳಿಸಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶದಿಂದ ಮಾತ್ರ ಭಾಷೆ ಉಳಿಯುತ್ತಿದೆ, ಸಾಹಿತ್ಯವನ್ನು ಪೋಷಿಸಲು ವಾಣಿಜ್ಯೋದ್ಯಮಿಗಳ ಸಹಕಾರ ಬೇಕು ಎಂದು ಹೇಳಿದರು.

ವೀರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಧೋಶ್ ಪೂವಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕುಂಬೇರ ಮನು ಕುಮಾರ್, ಸಾಹಿತ್ಯ ಪರಿಷತ್ತಿನ ನಿರ್ದೆಶಕ ಗೌರಿ ಕೃಷ್ಣಪ್ಪ ಹಾಗೂ ಚಂದನ್ ಕಾಮತ್, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾsÀಗವಹಿಸಿದ್ದರು.

ಕಾರ್ಯದರ್ಶಿ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಸ್ವಾಗತಿಸಿದರೆ, ಉಪನ್ಯಾಸಕ ಚಾಲ್ರ್ಸ್ ಡಿಸೋಜಾ ನಿರೂಪಿಸಿದರು. ವಿದ್ಯಾರ್ಥಿ ರಾಹುಲ್ ವಂದಿಸಿದರು.