ಮಡಿಕೇರಿ, ಸೆ. 25 : ಜಿಲ್ಲೆಯಾದ್ಯಾಂತ ಭಾರೀ ಮಳೆಯಿಂದಾಗಿ ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಉಂಟಾಗಿತ್ತು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ.
ಸಂತ್ರಸ್ತರಿಗೆ ವಿತರಿಸಲು ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸ್ವೀಕೃತವಾಗುತ್ತಿರುವ ಪರಿಹಾರ ಸಾಮಗ್ರಿಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರಗಳಾದ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗೋದಾಮು, ಕುಶಾಲನಗರ ಮತ್ತು ಪೊನ್ನಂಪೇಟೆಯ ಹಳೇ ನ್ಯಾಯಾಲಯ ಕಟ್ಟಡ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಗೆ ಆಹಾರ ಸಾಮಗ್ರಿಗಳು, ವೈದ್ಯಕೀಯ ಸಾಮಗ್ರಿಗಳು, ಕುಡಿಯುವ ನೀರು ಹಾಗೂ ಇತರೆ ಅಗತ್ಯ ಪರಿಹಾರ ಸಾಮಗ್ರಿಗಳು ತಾ. 24 ರಂದು ಜಿಲ್ಲೆಗೆ ಬಂದಿರುತ್ತದೆ ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಮುಖಾಂತರ ಹಂಚಿಕೆ ಮಾಡಲು 10 ಲಘು ವಾಹನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಪ್ರಮುಖ ಅವಶ್ಯವಿರುವ ಸಾಮಗ್ರಿಗಳು: 10 ಲೀಟರ್ ಎಣ್ಣೆ, 2 ಕೆ.ಜಿ. ತೊಗರಿ ಬೆಳೆ, 95 ಬಾಕ್ಸ್ ಕುಡಿಯುವ ನೀರಿನ ಬಾಟಲಿ, 4 ಬಾಕ್ಸ್ ಬಿಸ್ಕೆಟ್, 15 ಕೆ.ಜಿ.ರವೆ, 11 ಹೊದಿಕೆಗಳನ್ನು ಜಿಲ್ಲಾಡಳಿತದ ವತಿಯಂದ ಸಂತ್ರಸ್ತರಿಗೆ ತಾ. 24 ರಂದು ವಿತರಣೆ ಮಾಡಲಾಗಿದೆ.
ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರ ವಿವರ : ಮಡಿಕೇರಿ ತಾಲೂಕಿನ 8 ಪರಿಹಾರ ಕೇಂದ್ರಗಳಲ್ಲಿ 291 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 364 ಪುರುಷರು, ಮತ್ತು 362 ಮಹಿಳೆಯರು ಸೇರಿದಂತೆ 726 ಜನ ಸಂತ್ರಸ್ತರಿದ್ದಾರೆ. ಸೋಮವಾರಪೇಟೆ ತಾಲೂಕಿನ 1 ಪರಿಹಾರ ಕೇಂದ್ರಗಳಲ್ಲಿ 101 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 122 ಪುರುಷರು ಮತ್ತು 112 ಮಹಿಳೆಯರು ಸೇರಿದಂತೆ ಒಟ್ಟು 234 ಜನ ಸಂತ್ರಸ್ತರಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿರುವ 9 ಪರಿಹಾರ ಕೇಂದ್ರಗಳಲ್ಲಿ ಒಟ್ಟು 392 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 486 ಪುರುಷರು ಮತ್ತು 474 ಮಹಿಳೆಯರು ಸೇರಿದಂತೆ ಒಟ್ಟು 960 ಜನ ಸಂತ್ರಸ್ತರಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ತಿಳಿಸಿದ್ದಾರೆ.