ಗೋಣಿಕೊಪ್ಪ ವರದಿ, ಸೆ. 25 : ರಸ್ತೆಯಲ್ಲಿನ ಗುಂಡಿ ತಪ್ಪಿಸುವಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿಯಾಗಿ ಸವಾರ ಸಾವನಪ್ಪಿರುವ ಘಟನೆ ತಿತಿಮತಿಯಲ್ಲಿ ನಡೆದಿದೆ. ಬೈಲುಕುಪ್ಪೆಯ ಸುಬ್ರಮಣಿ (50) ಮೃತ ಸವಾರ. ಹಿಂಬದಿಯಲ್ಲಿ ಕುಳಿತಿದ್ದ ಸುಬ್ರಮಣಿ ಅವರ ಪತ್ನಿ ಮಂಜುಳ (40) ಗಾಯಗೊಂಡಿದ್ದು, ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.ಗೋಣಿಕೊಪ್ಪದಿಂದ ಪಿರಿಯಾಪಟ್ಟಣದ ಕಡೆ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿದ್ದ ಗುಂಡಿ ತಪ್ಪಿಸುವ ಸಂದರ್ಭ ಹಿಂಬದಿಯಲ್ಲಿದ್ದ ಲಾರಿ (ಕೆ.ಎಲ್. 57 ಎಂ. 9988) ನಿಯಂತ್ರಣ ತಪ್ಪಿ ಸ್ಕೂಟರ್ಗೆ ಡಿಕ್ಕಿಯಾಗಿದೆ. (ಮೊದಲ ಪುಟದಿಂದ) ಇದರಿಂದ ಲಾರಿಯ ಚಕ್ರಕ್ಕೆ ಸಿಲುಕಿ ತೀವ್ರ ರಕ್ತಸ್ರಾವವಾಗಿ ಸುಬ್ರಮಣಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮಂಜುಳ ಅವರಿಗೆ ಗಾಯವಾಗಿದ್ದು, ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಆಂಬ್ಯುಲೆನ್ಸ್ ಇಲ್ಲದೆ ಪರದಾಟ
ಗಾಯಾಳು ಮಂಜುಳ ಅವರನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲು ಆಂಬ್ಯುಲೆನ್ಸ್ ಇಲ್ಲದೆ ಸ್ಥಳೀಯರು ಪರದಾಡಿದರು. ತಿತಿಮತಿ ಆರೊಗ್ಯ ಕೇಂದ್ರದ ಆಂಬ್ಯುಲೆನ್ಸ್ ದೊರೆಯಲಿಲ್ಲ. 108 ಕ್ಕೆ ಕರೆ ಮಾಡಿದರೂ ವಾಹನ ದೊರೆಯದೇ ತೊಂದರೆಯಾಯಿತು. ನಂತರ ಗೋಣಿಕೊಪ್ಪ ವಾಹನ ಚಾಲಕರ ಸಂಘದ ಆಂಬ್ಯುಲೆನ್ಸ್ ಮೂಲಕ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು. ಆಸ್ಪತ್ರೆಯಲ್ಲಿ ಕೂಡ ಉತ್ತಮ ಸ್ಪಂದನೆ ದೊರೆಯಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. -ವರದಿ : ಸುದ್ದಿಪುತ್ರ , ದಿನೇಶ್