ಗೋಣಿಕೊಪ್ಪ ವರದಿ, ಅ. 12 : ಕಾಡಾನೆಯೊಂದು ಗ್ರಾಮಕ್ಕೆ ನುಗ್ಗಿ ಆತಂಕ ಮೂಡಿಸಿದ್ದ ಸಂದರ್ಭ ತಿತಿಮತಿ ಆರ್‍ಆರ್‍ಟಿ ತಂಡ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ನೂರಾರು ಜನರ ಪ್ರಾಣ ಉಳಿಯುವಂತಾಗಿದೆ.

ತಿತಿಮತಿ ಮುಖ್ಯ ರಸ್ತೆಗೂ ಬಂದ ಒಂಟಿ ಗಂಡಾನೆ, ಜನರನ್ನು ಅಟ್ಟಾಡಿಸಲು ಮುಂದಾಯಿತು, ತಾನು ನಡೆದದ್ದೆ ದಾರಿ ಎಂದು ತೋಟ, ಗ್ರಾಮ ನುಗ್ಗಿದ ಕಾಡಾನೆಯನ್ನು ನಿಯಂತ್ರಿಸಲಾಗದೆ ಜನರನ್ನು ರಕ್ಷಿಸಲು ಆರ್‍ಆರ್‍ಟಿ ತಂಡ ಮುಂದಾಯಿತು. ಕಾಡಾನೆ ತೆರಳುವ ದಾರಿಯಲ್ಲಿದ್ದವರನ್ನು ಓಡಿ ತಪ್ಪಿಸಕೊಳ್ಳಲು ತಂಡ ನೆರವಾಯಿತು. ಇದರಂತೆ ನೂರಾರು ಜನರನ್ನು ಕಾಡಾನೆಯಿಂದ ರಕ್ಷಿಸಿದರು. ತಿತಿಮತಿ ಪಟ್ಟಣದ ಸಮೀಪದಿಂದ ಮುಖ್ಯರಸ್ತೆ

ದಾಟಿದ ಕಾಡಾನೆ ಎಡತೊರೆ, ನೊಕ್ಯ ಗ್ರಾಮಕ್ಕೆ ನುಗ್ಗಿ ಗಾಬರಿಯಿಂದ ಓಡಾಡಿತು.

ಗುರುವಾರ ಮಧ್ಯಾಹ್ನ ತಿತಿಮತಿ ಬಿಸಿಕೆ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆ ಅಲ್ಲಿ ಜನರನ್ನು ಕಂಡು ಗಾಬರಿಗೊಂಡು ಗೋಣಿಕೊಪ್ಪ-ಮೈಸೂರು ಹೆದ್ದಾರಿಗೂ ಬಂದಿತು. ಇದನ್ನು ಅರಿತ ತಿತಿಮತಿ ಆರ್‍ಅರ್‍ಟಿ ತಂಡ ಆನೆ ಹೋಗುವ ದಾರಿಯಲ್ಲೇ ಸಾಗಿ ಕಾರ್ಮಿಕರು ಓಡಿ ತಪ್ಪಿಸಿಕೊಳ್ಳಲು ನೆರವಾದರು. ತಂಡ ತಂಡವಾಗಿ ಕಾರ್ಯಾಚರಣೆ ನಡೆಸಿ ತೋಟದಲ್ಲಿದ್ದ ಕಾರ್ಮಿಕರನ್ನು ತಮ್ಮ ವಾಹನಗಳಿಗೆ ಹತ್ತಿಸಿಕೊಂಡು ರಕ್ಷಿಸಿದರು. ಎಡತೊರೆ, ನೊಕ್ಯಾ ಗ್ರಾಮಕ್ಕೆ ನುಗ್ಗಿದ ಸಂದರ್ಭ ತೋಟದಲ್ಲಿನ ಕಾರ್ಮಿಕರ ಮೇಲೆರಗುವದನ್ನು ತಪ್ಪಿಸಿದರು. ಆನೆಯ ಮುಂದೆ ಓಡಿದ ಕಾರ್ಯಾಚರಣೆ ತಂಡ ಕಾಫಿ ತೋಟದಲ್ಲಿನ ಕಾರ್ಮಿಕರನ್ನು ಓಡಿ ತಪ್ಪಿಸಿಕೊಳ್ಳುವಂತೆ ಸೂಚಿಸಿ ನೆರವಾದರು. ಗ್ರಾಮದ ಬಹುತೇಕ ತೋಟದಲ್ಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದರು.

ನೊಕ್ಯಾ ಗ್ರಾಮದ ಬೆಳೆಗಾರ ಚೆಪ್ಪುಡೀರ ಕಾರ್ಯಪ್ಪ ಎಂಬವರ ತೋಟದಲ್ಲಿ 4 ವರ್ಷದ ಮಗುವಿನೊಂದಿಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ರಕ್ಷಿಸಿದರು. ಇದರ ಬೆನ್ನಲ್ಲೆ ಅದೇ ಸ್ಥಳಕ್ಕೆ ಬಂದ ಆನೆ ಅಲ್ಲಿ ದಾಂಧಲೆ ನಡೆಸಿತು. ಅದೃಷ್ಟವಶಾತ್ ಎಲ್ಲರೂ ಆನೆಯಿಂದ ಪಾರಾಗಿದ್ದಾರೆ. ತುರ್ತು ಕಾರ್ಯಾಚರಣೆ ನಡೆಸದಿದ್ದರೆ 10 ಕ್ಕೂ ಹೆಚ್ಚು ಕಾರ್ಮಿಕರ ಜೀವಕ್ಕೆ ಅಪಾಯವಾಗುತ್ತಿತ್ತು ಎಂದು ಸ್ಥಳಿಯರು ತಿತಿಮತಿ ಆರ್‍ಆರ್‍ಟಿ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಜೆ ಆನೆ ಮತ್ತೆ ಅರಣ್ಯ ಸೇರಿರುವದರಿಂದ ಆ ಭಾಗದ ಜನರ ಆತಂಕ ದೂರವಾಗಿದೆ.

-ವರದಿ : ಸುದ್ದಿಪುತ್ರ