ಕುಶಾಲನಗರ, ಅ. 25: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಗುರುವಾರ ಸಂಜೆ ಮಗುವೊಂದರ ಅಪಹರಣ ಪ್ರಹಸನ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ ಘಟನೆ ನಡೆಯಿತು. ಕುಶಾಲನಗರ ರಾಧಾಕೃಷ್ಣ ಬಡಾವಣೆಯಲ್ಲಿ ಘಟನೆ ನಡೆದಿದ್ದು ಕೊಪ್ಪ ವ್ಯಾಪ್ತಿಯ ಖಾಸಗಿ ಶಾಲೆಯೊಂದರ ಬಸ್ಸಿನಲ್ಲಿ ತಾಯಿ ಮಗು ತಮ್ಮ ಮನೆ ಬಳಿ ಬಂದಿಳಿದ ವೇಳೆ ಬಿಳಿ ಬಣ್ಣದ ರಿಡ್ಜ್ ಕಾರೊಂದರಲ್ಲಿ ದಿಢೀರನೆ ಬಂದ ಅಪರಿಚಿತರ ತಂಡ (ಕೆಎ.12.ಪಿ.2135-ಸಾರ್ವಜನಿಕರ ಮಾಹಿತಿಯಂತೆ) ಸ್ಥಳಕ್ಕೆ ಧಾವಿಸಿ ತಾಯಿಯಿಂದ ಮಗುವನ್ನು ಕಸಿದುಕೊಳ್ಳಲು ಯತ್ನಿಸಿದ ಪ್ರಕರಣ ಇದಾಗಿದೆ. ಈ ಸಂದರ್ಭ ಸಾರ್ವಜನಿಕರು ಗುಂಪುಗೂಡಿ ಕಾರನ್ನು ಅಡ್ಡಗಟ್ಟಲು ಯತ್ನಿಸಿದ ಸಂದರ್ಭ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಾಹಿತಿ ತಿಳಿದ ಕುಶಾಲನಗರ ಪಟ್ಟಣ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಘಟನೆಯ ವಿವರ ಪಡೆದು ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಕುಶಾಲನಗರ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ ಸಂದರ್ಭ ಇದೊಂದು ಕೌಟುಂಬಿಕ ಕಲಹ ಎನ್ನುವದು ಬಹಿರಂಗವಾಗಿದ್ದು ಗಂಡ - ಹೆಂಡತಿ ಜಗಳದ ನಡುವೆ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಘಟನೆಗೆ ಇತಿಶ್ರೀ ಹಾಡಲಾಯಿತು. ಗಂಡ ಹೆಂಡತಿ ಜಗಳದ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಆಗಾಗ್ಯೆ ರಾಜಿ ತೀರ್ಮಾನಗಳು ನಡೆದಿವೆ ಎನ್ನುವ ಮಾಹಿತಿ ಹೊರಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಿದ್ದರೂ ಸಾರ್ವಜನಿಕವಾಗಿ ಅಪಹರಣ ಪ್ರಹಸನ ನಡೆದ ಹಿನ್ನೆಲೆಯಲ್ಲಿ ಕಾರು ಮತ್ತು ದುಷ್ಕರ್ಮಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಸ್ಥಳೀಯ ಪೊಲೀಸರು ತೊಡಗಿದ್ದಾರೆ.