ಕುಶಾಲನಗರ, ಅ. 26: ಜಿಲ್ಲೆಯ ಮೂರು ಪಟ್ಟಣ ಪಂಚಾಯ್ತಿಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜೇತರಾಗುವದರೊಂದಿಗೆ ಬಿಜೆಪಿ ತಮ್ಮ ಹಿಡಿತ ಕಳೆದುಕೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಆಶಯ ವ್ಯಕ್ತಪಡಿಸಿ ದ್ದಾರೆ. ಅವರು ಕುಶಾಲನಗರಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಎರಡು ಪಟ್ಟಣ ಪಂಚಾಯಿತಿಗಳಲ್ಲಿ 5 ರಿಂದ 6 ಸ್ಥಾನಗಳಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಕುಶಾಲನಗರದಲ್ಲಿ ಯಾವದೇ ಮೈತ್ರಿ ಮಾಡಿಕೊಳ್ಳದೆ 16 ಸ್ಥಾನಗಳಿಗೂ ಕೂಡ ಸ್ವತಂತ್ರವಾಗಿ ಸ್ಪರ್ಧಿಸಿದ್ದು ಈ ಬಾರಿ ತಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗಳಿಸುವ ವಿಶ್ವಾಸ ಹೊಂದಿದ್ದೇವೆ ಎಂದರು.

ಉಸ್ತುವಾರಿ ಸಚಿವರು ಕುಶಾಲನಗರ ಪಟ್ಟಣ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ 10.30 ರಿಂದ 11.45 ರ ತನಕ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಪ್ರವಾಸ ಕಾರ್ಯಕ್ರಮ ಪಟ್ಟಿ ಬಿಡುಗಡೆಯಾಗಿದ್ದರೂ ಸಚಿವರು ಮಾತ್ರ ಯಾವದೇ ಬಡಾವಣೆಗಳಿಗೆ ತೆರಳದೆ ಮಡಿಕೇರಿ ಕಡೆಗೆ ಸಾಗಿದ್ದು ಪಕ್ಷದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಲ್ಲಿ ನಿರಾಸೆ ಮೂಡಿತು. ಮೈಸೂರಿನಿಂದ ತಡವಾಗಿ ಬಂದ ಸಚಿವರು ಕೊಪ್ಪ ಬಳಿ ಖಾಸಗಿ ಹೊಟೇಲ್ ಒಂದರಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ನೇರವಾಗಿ ಮಡಿಕೇರಿಯತ್ತ ತೆರಳಿದರು.