ಮರುಳಾದ ಪ್ರೇಕ್ಷಕರು

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಮೈಸೂರಿನ ನಟನಾ ಸಂಸ್ಥೆ ಯಿಂದ ನಗರದಲ್ಲಿ ಆಯೋಜಿಸಲ್ಪಟ್ಟ ಹೆಸರಾಂತ ಕಲಾವಿದ ಮಂಡ್ಯ ರಮೇಶ್ ನಿರ್ದೇಶನದ ಚೋರ ಚರಣದಾಸ ನಾಟಕ ಕಲಾ ಪ್ರೇಮಿಗಳ ಮನತಟ್ಟುವಲ್ಲಿ ಸಫಲವಾಯಿತು. ಚೋರ ಚರಣದಾಸ ನಾಟಕಕ್ಕೆ ಭಾರತೀಯ ವಿದ್ಯಾಭವನದ ಸಭಾಂಗಣ ಸಂಪೂರ್ಣ ಭರ್ತಿಯಾಗಿದ್ದು ಕಲಾಪ್ರೇಮಿಗಳ ಸ್ಪಂದನಕ್ಕೆ ಸಾಕ್ಷಿಯಾಗಿತ್ತು.

ನಾಟಕ ಪ್ರದರ್ಶನಕ್ಕೆ ಮುನ್ನ ಮಾತನಾಡಿದ ರಂಗನಿರ್ದೇಶಕ ಮಂಡ್ಯ ರಮೇಶ್, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸ್ವಸ್ಥ ಮನಃಸ್ಥಿತಿಯನ್ನು ರೂಪಿಸಲು ರಂಗಭೂಮಿಯ ಮೂಲಕ ಆತ್ಮಾವಲೋಕನಕ್ಕೆ ಹೊರಟು ನಟನ ಎಂಬ ಸಮಾನ ಮನಸ್ಕರ ತಂಡ ರೂಪಿಸಿದ್ದಾಗಿ ಹೇಳಿದರು. ನಟನ ಮೂಲಕ ಈಗಾಗಲೇ ರಂಗತರಬೇತಿ ಶಿಬಿರ ಆಯೋಜಿಸುವ ಮೂಲಕ ನೂರಾರು ರಂಗನಟರನ್ನು ಕಲಾಪ್ರಪಂಚಕ್ಕೆ ಪರಿಚಯಿಸಿದ್ದಾಗಿ ಹೇಳಿದರು. ನಟನ ತಂಡ ಜಾಗತಿಕ ಮಟ್ಟದಲ್ಲಿಯೂ ಹೆಸರುವಾಸಿಯಾಗಿದ್ದು ಹಲವಾರು ದೇಶಗಳಲ್ಲಿಯೂ ನಟನ ತಂಡ ರಂಗಪ್ರದರ್ಶನ ನೀಡಿದ್ದಾಗಿ ಮಂಡ್ಯ ರಮೇಶ್ ಮಾಹಿತಿ ನೀಡಿದರು. ಚೋರಚರಣದಾಸದ 239 ನೇ ಪ್ರದರ್ಶನ ತನಗೆ ಆಪ್ತವಾಗಿರುವ ಕೊಡಗಿನ ನೆಲದಲ್ಲಿ ಪ್ರದರ್ಶಿತವಾಗಿರುವ ಬಗ್ಗೆಯೂ ಮಂಡ್ಯ ರಮೇಶ್ ಹೆಮ್ಮೆಯಿಂದ ಹೇಳಿದರು. ಚೋರಚರಣದಾಸ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂತ್ರಸ್ತರ ನೆರವಿಗಾಗಿ ನಿಧಿ ಸಂಗ್ರಹದ ಉದ್ದೇಶದಿಂದ ಪ್ರದರ್ಶಿತಗೊಂಡಿತ್ತು.

ಆಕರ್ಷಿಸಿದ ಚೋರಚರಣದಾಸ : ಇದು ವಚನ ಭ್ರಷ್ಟತೆಯ ಕಾಲ, ಮಾತು ತಪ್ಪುವದರಲ್ಲಿ, ಕಣ್ಮುಂದೆಯೇ ಸುಳ್ಳು ಹೇಳುವದರಲ್ಲಿ ನಿಸ್ಸೀಮರು ಅನೇಕರು. ಅದರಲ್ಲೂ ಮೊಬೈಲ್ ಎಂಬ ನಿಸ್ತಂತು ದೂರವಾಣಿ ಬಂದ ಮೇಲಂತೂ ಯಾರ ಮಾತಿಗೆ ಬೆಲೆಯೇ ಇಲ್ಲ ಎಂಬಂತಾಗಿದೆ. ಬಾಯಿ ತೆರೆದರೆ ಸುಳ್ಳು ತಾಂಡವವಾಡುತ್ತದೆ. ಸತ್ಯ ಬಾಲ ಮುದುರಿಕೊಂಡು ಮೂಲೆ ಸೇರಿಬಿಡುತ್ತದೆ. ಮಾತು ಎನ್ನುವುದು ಕೇವಲ ಶಬ್ದವಲ್ಲ, ಅದು ಅಂತರಾತ್ಮದ ಕೂಗು ಎಂಬ ವಾಸ್ತವ ಮರೆತೇ ಹೋಗಿದೆ. ಇದೇ ಅಂಶವನ್ನು ಮುಖ್ಯವಾಗಿರಿಸಿಕೊಂಡು ರೂಪುಗೊಂಡದ್ದೇ ಚೋರಚರಣದಾಸ ರಂಗಪ್ರಯೋಗ.

ಆ ಊರಲ್ಲೊಬ್ಬ ಸನ್ಯಾಸಿ, ಆತನ ಶಿಷ್ಯತ್ವವನ್ನು ಬಯಸಿ ಆಸ್ತಿಕರಲ್ಲದೇ, ಲಂಪಟರು, ಭ್ರಷ್ಟರು, ಲ¥sóÀಂಗರು ಅಡ್ಡ ಬೀಳುತ್ತಿರುತ್ತಾರೆ. “ಸರ್ವಸಂಗ ಪರಿತ್ಯಾಗಿಯಾಗಿ ನನ್ನೆಡೆಗೆ ಬಾ” ಎಂಬ ಗುರುವಿನ ಉಪದೇಶಕ್ಕನುಗುಣವಾಗಿ ತಮ್ಮ ಇಚ್ಚಾನುಸಾರ ಶಿಷ್ಯ ಪಡೆ ಈ ಕಪಟ ಸನ್ಯಾಸಿಗೆ ಬೆಳೆಯುತ್ತದೆ. ಆಗ ಪ್ರತ್ಯಕ್ಷನಾಗುತ್ತಾನೆ ಚೋರ ಚರಣದಾಸ. ಆತನದ್ದು ಇಡೀ ಪ್ರದೇಶದಲ್ಲೇ ಕುಖ್ಯಾತ ಹೆಸರು. ಹೆಸರು ಕೇಳಿದರೆ ಜನ ನಡುಗುವಂಥ ಕುಖ್ಯಾತಿ ಈತನದ್ದು. ಅಂಥವನು ಆ ಯತಿಯ ಕಾಲಿಗೆ ಬೀಳುತ್ತಾನೆ. ಶಿಷ್ಯತ್ವ ದಯಪಾಲಿಸು ಎನ್ನುತ್ತಾನೆ. ಗುರು ಷರತ್ತು ವಿಧಿಸುತ್ತಾನೆ. ಒಂದೇನು ನಾಲ್ಕು ಮಾತು ಕೊಡುತ್ತೇನೆ. ಮಾತಿಗೆ ಬದ್ಧನಾಗುತ್ತೇನೆ ಎನ್ನುತ್ತಾನೆ ಚರಣದಾಸ. ಚರಣದಾಸ ಬದುಕಿನಲ್ಲಿ ಹಂತ ಹಂತಕ್ಕೂ ಗುರುವಿಗೆ ಕೊಟ್ಟ ಮಾತನ್ನು ಮುರಿಯುವ ಪ್ರಸಂಗಗಳು ಆಗಿಂದಾಗ್ಗೆ ಎದುರಾಗುತ್ತಲೇ ಇರುತ್ತದೆ. ಚೋರನಿಗೆ ಉಭಯ ಸಂಕಟ. ವಚನ ಭ್ರಷ್ಟನಾಗುವುದೆ ? ಕೊಟ್ಟ ಮಾತಿಗೆ ಬದ್ಧನಾಗುವುದೇ ? ಆತ ನಿಜಕ್ಕೂ ಗೊಂದಲಕ್ಕೊಳಗಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾನೆ ಎಂಬುದೇ ಚೋರಚರಣದಾಸದ ಕಥಾವಸ್ತು. ಅಂತಿಮವಾಗಿ ನಾಟಕದ ಪ್ರೇಕ್ಷಕರು ಬಯಸುವಂತೆ ವಿಭಿನ್ನ ರೀತಿಯಲ್ಲಿ ನಾಟಕಕ್ಕೆ ಅಂತ್ಯಕಾಣಿಸುವ ಮೂಲಕ ಚೋರಚರಣದಾಸ ವಿಭಿನ್ನತೆಯೊಂದಿಗೆ ವಿಶಿಷ್ಟತೆಗೆ ಕಾರಣವಾಯಿತು.

ಮೂರು ದಶಕಗಳಷ್ಟು ಹಿಂದಿನ ಹಬೀಬ್ ತನ್ವೀರರ ಮೂಲ ಕಥೆಯ ಈ ರಂಗಪ್ರಯೋಗಕ್ಕೆ 2017ರಲ್ಲಿ ರಂಗಸೇವೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದ ರಂಗನಿರ್ದೇಶಕ, ರಂಗನಟ, ಸಿನಿಮಾ ಕಲಾವಿದ ಮಂಡ್ಯ ರಮೇಶ್ ಅವರ ಸಮರ್ಥ ನಿರ್ದೇಶನವಿತ್ತು. ಸಾರ್ವಕಾಲಿಕವಾಗಿದೆ ಎನ್ನುವಂತೆ ಅನೇಕ ವಾಸ್ತವ ಸತ್ಯಗಳನ್ನು ದ್ವನಿಸುತ್ತದೆ. ಅತ್ಯಂತ ವಿಡಂಬನಾತ್ಮಕವಾಗಿ, ಕೃತಿಯ ಆಂತರಿಕ ದ್ವನಿಯೊಂದಿಗೆ ಈ ಜಾಯಮಾನಕ್ಕೆ ಒಗ್ಗುವ ಹಾಗೆ ನಾಟಕ ವೇದಿಕೆಯಲ್ಲಿ ತೆರೆದುಕೊಳ್ಳುತ್ತದೆ. ?ಅನಿಲ್ ಎಚ್. ಟಿ.