ಕೂಡಿಗೆ, ಅ. 27: ಇತ್ತೀಚೆಗೆ ಭಾರೀ ಮಳೆಯಿಂದಾಗಿ ಮನೆ ಕಳೆದುಕೊಂಡಿದ್ದ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ನಿವಾಸಿ ಪದ್ಮ ಎಂಬವರು ಕಂದಾಯ ಇಲಾಖೆ ಹಾಗೂ ಗ್ರಾ.ಪಂ. ಪರಿಹಾರ ಒದಗಿಸಿಲ್ಲ ಎಂದು ಜಿಲ್ಲಾಧಿಕಾರಿಯವರಿಗೆ ಖುದ್ದಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೂರು ನೀಡಿದ ಸಂತ್ರಸ್ತೆ ಪದ್ಮ ಈ ಜಾಗವು ತನ್ನ ಗಮನಕ್ಕೆ ಬಾರದೆ ಬೇರೆಯವರಿಗೆ ಆರ್.ಟಿ.ಸಿ. ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಸ್ಥಳೀಯ ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎನ್ ರಾಜಾರಾವ್, ಗ್ರಾಮಸ್ಥರಾದ ಕೆ.ಕೆ. ಸೋಮಣ್ಣ, ಸನ್ನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರಿಂದ ಮಾಹಿತಿ ಪಡೆದರು. ಸ್ಥಳೀಯರ ಮಾಹಿತಿಯ ಮೇರೆಗೆ ಭದ್ರಮ್ಮ ಅವರ ಮಗಳಾದ ಪದ್ಮ ಕಳೆದ 40 ವರ್ಷಗಳಿಂದ ಅದೇ ಸ್ಥಳದಲ್ಲಿ ವಾಸಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿಯಿತು. ನಂತರ ಜಿಲ್ಲಾಧಿಕಾರಿಯವರು ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಲೋಕೇಶ್ ಮತ್ತು ಕಂದಾಯ ನಿರೀಕ್ಷಕ ಮಧುಕುಮಾರ್, ಪಂಚಾಯಿತಿ ಕಾರ್ಯದರ್ಶಿ ಶಿಲ್ಪ ಮತ್ತಿತರರು ಇದ್ದರು.