ನಾಪೋಕ್ಲು, ಅ. 27: ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸಾ ವಾಹನವನ್ನು ಕೊಡಗು ಜಿಲ್ಲಾ ಅನ್ಸರುಲ್ ಮುಸ್ಲಿಮೀನ್ ಚಾರಿಟಿ ವತಿಯಿಂದ ಕೊಡುಗೆಯಾಗಿ ನೀಡಲಾಯಿತು. ನಿರ್ದೇಶಕ ಸಯ್ಯದ್ ಇಲಿಯಾಸ್ ತಂಞಳ್ ವಾಹನದ ಕೀಯನ್ನು ಹಸ್ತಾಂತರಿಸಿದರು.

ನಾಪೋಕ್ಲು ಹೋಬಳಿಯ ಎಲ್ಲಾ ಸಮುದಾಯದ ಬಡವರಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಅನ್ಸರುಲ್ ಮುಸ್ಲಿಮಿನ್ ಚಾರಿಟಿ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವಾಹನವನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ವಕ್ಫ್‍ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್‍ರಹಿಮಾನ್ ಹೇಳಿದರು.

ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮಾತನಾಡಿ, ಸೌಲಭ್ಯವನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಸಲಹೆಯಿತ್ತರು. ಜಿಲ್ಲಾ ಆರೋಗ್ಯ ಕೇಂದ್ರದ ಉಪಮುಖ್ಯ ವೈದ್ಯಾಧಿಕಾರಿ ಡಾ. ದೇವದಾಸ್ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ನಗರದ ಸುಸಜ್ಜಿತ ಆಸ್ಪತ್ರೆಗೆ ಕ್ಷಿಪ್ರ ಸಮಯದಲ್ಲಿ ರೋಗಿಗಳ ಸಾಗಾಟಕ್ಕೆ ತುರ್ತು ಚಿಕಿತ್ಸಾ ವಾಹನದ ಕೊಡುಗೆ ಪ್ರಯೋಜನಕಾರಿಯಾಗಿದೆ ಎಂದರು. ಅನ್ಸರುಲ್ ಮುಸ್ಲಿಮಿನ್ ಚಾರಿಟಿಯ ನಿರ್ದೇಶಕ ಸಯ್ಯದ್ ಇಲಿಯಾಸ್ ತಂಞಳ್ ವಾಹನ ಚಾಲಕ ಹ್ಯಾರೀಸ್‍ಗೆ ವಾಹನದ ಕೀಯನ್ನು ಹಸ್ತಾಂತರಿಸಿದರು.

ಗ್ರಾಮಪಂಚಾಯಿತಿ ಸದಸ್ಯ ರಷೀದ್, ಜೆಡಿಎಸ್ ಕಾರ್ಯಕರ್ತ ಮನ್ಸೂರ್ ಆಲಿ, ಹ್ಯಾರಿಸ್ ಮತ್ತಿತರರು ಇದ್ದರು. ಅಶ್ರಫ್ ಎಮ್ಮೆಮಾಡು ಸ್ವಾಗತಿಸಿ ನಿರೂಪಿಸಿದರು. ಸಿದ್ದಿಕ್ ವಂದಿಸಿದರು.