ಎರಡು ಗುಂಪುಗಳ ನಡುವೆ ಘರ್ಷಣೆ : 6 ಮಂದಿ ವಿರುದ್ಧ ಪ್ರಕರಣ ದಾಖಲು-ಮೂವರ ಬಂಧನ ವೀರಾಜಪೇಟೆ, ಅ. 27: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ನಿನ್ನೆ ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಇಲ್ಲಿನ ನಗರ ಪೊಲೀಸರು ಒಂದು ಗುಂಪಿನ ನಾಲ್ಕು ಮಂದಿ ಹಾಗೂ ಮತ್ತೊಂದು ಗುಂಪಿನ ಎರಡು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಎರಡು ಗುಂಪುಗಳು ಬೇರೆ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದವರಾಗಿದ್ದು ಎರಡು ಗುಂಪುಗಳು ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ನಡದುಕೊಂಡು ಹೋಗುತ್ತಿದ್ದಾಗ ಮತ್ತೊಂದು ಗುಂಪು ದಾರಿ ಅಡ್ಡಗಟ್ಟಿದ ಕಾರಣಕ್ಕಾಗಿ ಘರ್ಷಣೆ ಉಂಟಾದಾಗ ಒಂದು ಗುಂಪಿನ ಅನೀಶ್, ಶಶಿ, ಅಭಿಜಿತ್ ಹಾಗೂ ಮಹಮ್ಮದ್ ಎಂಬ ನಾಲ್ವರು ಸೇರಿ ವಿರುದ್ಧ ಗುಂಪಿನ ಸಜೀವನ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರೆಂದು ಮಣಿಕಂಠ ಎಂಬಾತ ನೀಡಿದ ದೂರಿನ ಮೇರೆ ಪೊಲೀಸರು ಅನೀಶ್, ಶಶಿ, ಅಭಿಜಿತ್ ಎಂಬ ಮೂವರನ್ನು ಬಂಧಿಸಿದ್ದಾರೆ. ಮಹಮ್ಮದ್ ಎಂಬಾತ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿರುವದಾಗಿ ಪೊಲೀಸರು ತಿಳಿಸಿದ್ದಾರೆ.

ಅನೀಶ್ ನಗರ ಪೊಲೀಸರಿಗೆ ನೀಡಿದ ದೂರಿನ ಮೇರೆ ಪೊಲೀಸರು ಸಜೀವನ್ ಹಾಗೂ ಜೀವನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗಂಭೀರ ಗಾಯಗೊಂಡಿರುವ ಸಜೀವನ್‍ನ್ನು ಚಿಕಿತ್ಸೆಗಾಗಿ ಮಡಿಕೇರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.