ಮಡಿಕೇರಿ, ಅ. 28: ಮಡಿಕೇರಿ-ಜೋಡುಪಾಲ ಮಿನಿ ಬಸ್ ಸಂಚಾರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಈ ಸಂಬಂಧ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದು, ಪ್ರವಾಹದಿಂದ ಕೊಚ್ಚಿಹೋಗಿದ್ದ ರಸ್ತೆ ಸರಿಪಡಿಸುತ್ತಿರುವದರಿಂದ ಮಡಿಕೇರಿ-ಮಂಗಳೂರು ನೇರ ಬಸ್ ಸಂಚಾರವನ್ನು ಪುನರ್ ಆರಂಭಿಸುವಂತೆ ಜಿಲ್ಲಾಧಿಕಾರಿಯವರಿಗೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಪತ್ರ ಬರೆದಿದ್ದಾರೆ. ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಸಿದ್ದಾಪುರಕ್ಕೆ ಬೆಳಿಗ್ಗೆ 8 ಗಂಟೆಗೆ ಹೊರತುಪಡಿಸಿ 10 ಗಂಟೆಯವರೆಗೆ ಯಾವದೇ ಬಸ್‍ಗಳು ಸಂಚರಿಸುತ್ತಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ನೌಕರರು, ಶಿಕ್ಷಕರು, ವಿದ್ಯಾರ್ಥಿಗಳು, ಬ್ಯಾಂಕ್ ಉದ್ಯೋಗಿಗಳು, ಕಾರ್ಮಿಕ ವರ್ಗದವರು ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಎಂದು ಸಾರ್ವಜನಿಕರು ಮನವಿ ಸಲ್ಲಿಸಿರುತ್ತಾರೆ. ಬೆಳಿಗ್ಗೆ 8.45 ಗಂಟೆಗೆ ಮಡಿಕೇರಿಯಿಂದ ಸಿದ್ದಾಪುರಕ್ಕೆ ಸರ್ಕಾರಿ ಅಥವಾ ಖಾಸಗಿ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಬಿ.ಎ. ಹರೀಶ್ ಮನವಿ ಮಾಡಿದ್ದಾರೆ.