ಮಡಿಕೇರಿ, ಅ. 28: ಕೊಡಗು ಜಿಲ್ಲಾ ಮಾಜಿ ಸೈನಿಕರ 2017-18ನೇ ಸಾಲಿನ ಮಹಾಸಭೆಯು ಮಡಿಕೇರಿಯ ರೋಟರಿ ಹಾಲ್‍ನಲ್ಲಿ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಸೈನಿಕರ ಸಂಘಗಳಿಂದ ಸಂಗ್ರಹಿಸಿದ ಸುಮಾರು ರೂ. 3 ಲಕ್ಷದ 19 ಸಾವಿರ ಹಣವನ್ನು ಪ್ರಕೃತಿ ವಿಕೋಪದಿಂದ ತೊಂದರೆಗೆ ಒಳಗಾದ 24 ಮಾಜಿ ಸೈನಿಕರ ಕುಟುಂಬದವರಿಗೆ ಧನ ಸಹಾಯ ರೂಪದಲ್ಲಿ ನೀಡಲಾಯಿತು.

ಸಂಘದ ಕಾರ್ಯದರ್ಶಿ ಮೇಜರ್ ಓ.ಎಸ್ ಚಿಂಗಪ್ಪ ಸಂಘದ ಕಳೆದ ಸಾಲಿನ ಮಹಾಸಭೆಯ ವರದಿ ವಾಚನ ಮಾಡಿದರು. ಸೇನೆಯಿಂದ ನಿವೃತ್ತರಾದ ಮೇಲೆ ಪ್ರತಿಯೊಬ್ಬರೂ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದವರು ಹೇಳಿದರು.

ಈ ಸಂದರ್ಭ ಕೊಡಗಿನಲ್ಲಿ ಉಂಟಾದ ಅತಿವೃಷ್ಟಿಯಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಲ್ ಮಾದಪ್ಪ, ಗಣೇಶ್, ನಾಚಪ್ಪ, ಅಯ್ಯಪ್ಪ, ಜಿಲ್ಲೆಯ ಇತರೆಡೆಯ 8 ಮಾಜಿ ಸೈನಿಕರ ಸಂಘದ ಅಧ್ಯಕ್ಷರುಗಳು ಮತ್ತಿತರರು ಇದ್ದರು.