ಕೂಡಿಗೆ, ಅ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಹೆಬ್ಬಾಲೆ ಕನಕ ಬ್ಲಾಕ್ ಲಕ್ಷ್ಮಮ್ಮ ಎಂಬವರಿಗೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಸತೀಶ್ ಅವರು ಮಾಸಾಶನವನ್ನು ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ನಿರ್ಗತಿಕರಿಗೆ ಮಾಶಾಸನ ನೀಡುವ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮ. ಇದರಿಂದ ನಿರ್ಗತಿಕರಿಗೆ ಜೀವನ ನಿರ್ವಹಣೆ ಮಾಡಲು ಉತ್ತಮ ಅವಕಾಶ ಎಂದರು.

ವಲಯ ಮೇಲ್ವಿಚಾರಕ ವಿನೋದ್‍ಕುಮಾರ್ ಮಾತನಾಡಿ, ಕ್ಷೇತ್ರದಿಂದ ಪೂಜ್ಯರು ನಿರ್ಗತಿಕರಿಗೆ ಮಾಸಾಶನ ಮಂಜೂರು ಮಾಡುತ್ತಿದ್ದು, ಹೆಬ್ಬಾಲೆ ವಲಯದಲ್ಲಿ ಈಗಾಗಲೇ 3 ಕುಟುಂಬಗಳಿಗೆ ರೂ. 750 ರಂತೆ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಗಳಾದ ಕಲ್ಪನಾ, ಲಕ್ಷ್ಮಿ ಸಂಘದ ಸದಸ್ಯರು ಇದ್ದರು.