ಗೋಣಿಕೊಪ್ಪಲು, ಅ. 29: ಪಾರ್ವಂಗಡ ಕುಟುಂಬಸ್ಥರ ಇತಿಹಾಸ ಕುರಿತಾದ ‘ಪಾರ್ವಂಗಡ’ ಪುಸ್ತಕವನ್ನು ಇತ್ತೀಚೆಗೆ ಬೆಸಗೂರು ಗ್ರಾಮದ ಐನ್‍ಮನೆಯಲ್ಲಿ ಅಂತರಾಷ್ಟ್ರೀಯ ಅಥ್ಲೆಟ್ ಸುಗುಣ ಪೆÇನ್ನಪ್ಪ ಬಿಡುಗಡೆ ಮಾಡಿದರು.

ಬೆಸಗೂರು ಐನ್‍ಮನೆಯಲ್ಲಿ ‘ಮಹಿಳೆಯರು, ಬಂಧು ಮಿತ್ರರು, ಕುಟುಂಬಸ್ಥರ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು. ಪಾರ್ವಂಗಡ ಕುಟುಂಬದ ಸುಮಾರು 200 ವರ್ಷದ ಇತಿಹಾಸ ಹಾಗೂ 8 ತಲೆಮಾರಿನ ವಿವರಗಳನ್ನು ಪುಸ್ತಕದಲ್ಲಿ ನೀಡಲಾಗಿದೆ. ಪಾರ್ವಂಗಡ ರೋಹಿಣಿ ಭೀಮಯ್ಯ ಬರೆದಿರುವ ಪುಸ್ತಕದ ಆಂಗ್ಲ ತರ್ಜುಮೆಯನ್ನು ಬೋಸ್ ಪೆಮ್ಮಯ್ಯ ಕಟ್ಟಿಕೊಟ್ಟಿದ್ದಾರೆ. ವಿವಿಧ ಛಾಯಾಚಿತ್ರಣವೂ ಪುಸ್ತಕದಲ್ಲಿದೆ. ಹಿರಿಯ ತಲೆಮಾರಿನ ತ್ಯಾಗಮಯ ಬದುಕನ್ನು ಇಂದಿನ ಯುವಪೀಳಿಗೆಗೆ ಮನನ ಮಾಡುವ ನಿಟ್ಟಿನಲ್ಲಿ ಪುಸ್ತಕ ಹೊರತರಲಾಗಿದೆ ಎಂದು ಲೇಖಕಿ ರೋಹಿಣಿ ಭೀಮಯ್ಯ ತಿಳಿಸಿದ್ದಾರೆ. 1925 ರಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷವು ಮೊದಲಿಗೆ ಅಸ್ತಿತ್ವಕ್ಕೆ ಬಂದ ಸಂದರ್ಭ ಪಾರ್ವಂಗಡ ಟಿ. ಕುಶಾಲಪ್ಪ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಲಾದ ವಿವರ ಇದೆ. ಸುಮಾರು 80 ಪುಟಗಳ ಪುಸ್ತಕವು ಹಲವು ವಿಶಿಷ್ಟ ಸುದ್ದಿ ಚಿತ್ರಗಳನ್ನೊಳಗೊಂಡಿದೆ. ಕಾರ್ಯಕ್ರಮದಲ್ಲಿ ಕರ್ನಲ್ ವಿವೇಕ್ ಪೂವಯ್ಯ, ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಪಿ.ಜಿ.ಕಾರ್ಯಪ್ಪ, ಪಿ.ಜಿ. ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.