*ಗೋಣಿಕೊಪ್ಪಲು, ಅ. 29 : ಕರ್ತವ್ಯನಿರತ ಲೈನ್‍ಮೆನ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪೊನ್ನಂಪೇಟೆ ಪೊಲೀಸರು ಸ್ಥಳೀಯ ಸಾಯಿಶಂಕರ ವಿದ್ಯಾಸಂಸ್ಥೆ ಅಧ್ಯಕ್ಷ ಕೋಳೆರ ಝರು ಗಣಪತಿ ಅವರನ್ನು ಸೋಮವಾರ ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಲಾಗಿದೆ. ವಿದ್ಯುತ್ ಬಿಲ್ ಪಾವತಿಸದೇ ಇದ್ದ ಹಿನ್ನೆಲೆಯಲ್ಲಿ ಸಾಯಿಶಂಕರ ವಿದ್ಯಾಸಂಸ್ಥೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಶನಿವಾರ ಲೈನ್‍ಮೆನ್ ಮಹದೇವಸ್ವಾಮಿ ತೆರಳಿದ್ದರು. ಈ ಸಂದರ್ಭ ಝರು ಗಣಪತಿ ಮಹದೇವಸ್ವಾಮಿ ಅವರ ಮೇಲೆ ಹಲ್ಲೆ ನಡೆÀಸಿದ್ದರು ಎಂದು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೆಸ್ಕಾಂ ನೌಕರರು ತಪ್ಪ್ಪಿತಸ್ತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಪಡಿಸಿದ್ದರು. ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ನೌಕರರ ಮೇಲೆ ಹಲ್ಲೆ ಸಂಬಂಧ ಸೆಕ್ಷನ್ 353ರ ಅಡಿಯಲ್ಲಿ ಝರು ಗಣಪತಿ ವಿರುದ್ಧ ಸಬ್‍ಇನ್ಸ್‍ಪೆಕ್ಟರ್ ಮಹೇಶ್ ಮೊಕದ್ದಮೆ ದಾಖಲಿಸಿಕೊಂಡಿದ್ದರು.

ಸೋಮವಾರ ಗೋಣಿಕೊಪ್ಪಲಿನ ಸೆಸ್ಕಾಂ ಕಚೇರಿಯಲ್ಲಿ ಸಭೆ ನಡೆಸಿದ ಸ್ಥಳೀಯ ಸೆಸ್ಕಾಂ ನೌಕರರು ಕರ್ತವ್ಯ ನಿರತ ಲೈನ್‍ಮೆನ್‍ಗಳಿಗೆ ಸೂಕ್ರ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಜಾಮೀನು

ಝರು ಗಣಪತಿ ಅವರಿಗೆ ಪೊನ್ನಂಪೇಟೆ ನ್ಯಾಯಾಲಯ ಜಾಮೀನು ನೀಡಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಬಾರದು. ನೌಕರರ ಮೇಲೆ ಹಲ್ಲೆ ನಡೆಸಬಾರದು. ಈ ಸಂಬಂಧ ಮುಂದುವರಿಯುವ ಪೊಲೀಸ್ ತನಿಖೆಗೆ ಸಹಕರಿಸಬೇಕು. ಯಾವದೇ ಸಾಕ್ಷ್ಯ ನಾಶಪಡಿಸಬಾರದು ಎಂಬ ಷರತ್ತಿನೊಂದಿಗೆ ನ್ಯಾಯಾಧೀಶರಾದ ಮೋಹನ್‍ಗೌಡ ಜಾಮೀನು ನೀಡಿದರು. ಆರೋಪಿ ಪರ ವಕೀಲ ಎಂ.ಜಿ. ರಾಕೇಶ್ ವಕಾಲತ್ತು ವಹಿಸಿದ್ದರು.