ವೀರಾಜಪೇಟೆ, ಅ. 30: ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ ಜರುಗಿತು. ಪ್ರಾಕೃತಿಕ ವಿಕೋಪದ ಹಿನ್ನೆಲೆ ಮುಂದೂಡ ಲಾಗಿದ್ದ ಈ ಕಾರ್ಯ ಕ್ರಮವನ್ನು ಸಂತ್ರ ಸ್ತರೋರ್ವರಿಗೆ ನೆರವು ನೀಡುವದರ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಗಣಪತಿ ವಿದ್ಯಾರ್ಥಿಗಳು ಶಿಸ್ತು, ಸ್ವಚ್ಛತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಪ್ರಸ್ತುತ ದಿನಗಳಲ್ಲಿ ಶುಚಿತ್ವದ ಬಗ್ಗೆ ಭಾಷಣಗಳಿಂದ ಯಾವದೇ ಲಾಭವಿಲ್ಲ. ಸ್ವಚ್ಛತೆ ನಮ್ಮ ಬದುಕಿನ ರೀತಿಯಾಗಬೇಕೆಂದರು. ಉತ್ತಮ ಯೋಜನೆಗಳನ್ನು ರೂಪಿಸಿ ಕೊಂಡಾಗ ಕಾರ್ಯಗಳು ಸುಸೂತ್ರವಾಗಿ ಜರುಗಲು ಸಾಧ್ಯ ಎಂದರು. ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ನೆರವಿನಿಂದ ಸಂಗ್ರಹಿಸಿದ ಸಹಾಯಧನವನ್ನು ಸ್ವೀಕರಿಸಿದ ಐಮುಡಿಯಂಡ ಹರೀಶ್ ಸೋಮಣ್ಣ ಪ್ರಾಕೃತಿಕ ವಿಕೋಪದ ಮೂಲಕ ಪ್ರಕೃತಿ ನಮಗೆ ಎಚ್ಚರಿಕೆ ನೀಡಿದೆ. ಸಹೃದಯರ ನೆರವು ಹಾರೈಕೆ ಒತ್ತಾಸೆಗಳಿಂದ ಮುಂದಿನ ಐದು ವರ್ಷಗಳಲ್ಲಿ ಮತ್ತೆ ಚೇತರಿಸಿಕೊಂಡು ವಿದ್ಯಾಸಂಸ್ಥೆಗೆ ಕೈಯಲ್ಲಾದ ನೆರವು ನೀಡುತ್ತೇನೆ ಎಂದರು. ತ್ವರಿತ ಸಂಪಾದನೆಯ ಮಾರ್ಗವಾದ ಹೋಂ ಸ್ಟೇ, ರೆಸಾರ್ಟ್ ಉದ್ಯಮದ ಮಾರ್ಗ ವಿದ್ದರೂ ಪ್ರಕೃತಿಗೆ ಪೂರಕವಾದ ಕೃಷಿಯಿಂದಲೇ ಮತ್ತೆ ಬದುಕು ಕಟ್ಟಿಕೊಳ್ಳುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಸ್ವಾಗತಿಸಿದರು. ಸಂಘದ ಸಂಚಾಲಕಿ ಎ.ಎಂ. ಡಯಾನ ಪದಾಧಿಕಾರಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಯರಾದ ಮಾಳವಿಕ ಮತ್ತು ಗಾನವಿ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕಿ ಎಂ.ಪಿ. ದಮಯಂತಿ ವಂದಿಸಿದರು. ವಿದ್ಯಾರ್ಥಿನಿಯರಾದ ರಕ್ಷಿತಾ ಮತ್ತು ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.