ಶನಿವಾರಸಂತೆ, ಅ. 29: ಸ್ನೇಹಿತನ ಸಹೋದರಿಯ ಮದುವೆಗೆಂದು ಯಶಸ್ವಿ ಕಲ್ಯಾಣ ಮಂಟಪಕ್ಕೆ ತೆರಳಿ ಊಟದ ಬಳಿಕ ಮತ್ತಿಬ್ಬರು ಸ್ನೇಹಿತರೊಂದಿಗೆ ಕುಳಿತು ಮಾತನಾಡುತ್ತಿದ್ದಾಗ ಆರೋಪಿಯೊಬ್ಬರು ಹಲ್ಲೆ ಮಾಡಿರುವದಾಗಿ ವ್ಯಕ್ತಿಯೊಬ್ಬರು ದೂರು ನೀಡಿದ ಘಟನೆ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ಮುಳ್ಳೂರು ಗ್ರಾಮದ ಎಂ.ಆರ್. ದಿನೇಶ್ ಸ್ನೇಹಿತರಾದ ಗೃತಿನ್ ಮತ್ತು ಮಿಲನ್ ಜೊತೆ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಎಸ್.ಟಿ. ಕೀರ್ತಿ ಎಂಬಾತ ತನ್ನನ್ನು ಕರೆದು ವಿನಾ ಕಾರಣ ಜಗಳವಾಡಿ ಜೊತೆ ಇದ್ದವರೊಂದಿಗೆ ಸೇರಿ ಕೈಯಲ್ಲಿದ್ದ ಹಾಕಿ ಸ್ಟಿಕ್ ಹಾಗೂ ದೊಣ್ಣೆಯಿಂದ ಗೃತಿನ್ ಮತ್ತು ಮಿಲನ್ ಅವರಿಗೆ ಹೊಡೆದು ಗಾಯಗೊಳಿಸಿರುತ್ತಾರೆ. ಈ ಸಂದರ್ಭ ಕುತ್ತಿಗೆಯಲ್ಲಿದ್ದ ಚಿನ್ನದ ಚೈನು ಸಹ ಕಳೆದು ಹೋಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೇಲಿನ ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ಎಸ್.ಟಿ. ಕೀರ್ತಿ ಎಂಬವರು ತಾವೂ ಯಶಸ್ವಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಹೋಗಿದ್ದು, ಊಟ ಮುಗಿಸಿ ಮೂತ್ರ ವಿಸರ್ಜನೆಗಾಗಿ ಶೌಚಾಲಯಕ್ಕೆ ಹೋಗುತ್ತಿದ್ದಾಗ ಪರಿಚಿತರಾದ ಗೃತಿನ್ ಮತ್ತು ಮಿಲನ್‍ರ ಜತೆ ಇದ್ದ ವ್ಯಕ್ತಿ ತನ್ನನ್ನು ಕರೆದು ಏಕಾಏಕಿ ಕೈಯಲ್ಲಿದ್ದ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವದಾಗಿ ದೂರಿದ್ದಾರೆ.

ಎಂ.ಆರ್. ದಿನೇಶ್ ಹಾಗೂ ಎಸ್.ಟಿ. ಕೀರ್ತಿ ಇಬ್ಬರು ನೀಡಿದ ದೂರಿನ ಅನ್ವಯ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಕೃಷ್ಣೇಗೌಡ ಎರಡೂ ಪ್ರಕರಣಗಳನ್ನು ದಾಖಲಿಸಿದ್ದಾರೆ.