ಗೋಣಿಕೊಪ್ಪ ವರದಿ, ಅ. 31: ಕಾಡುಬೆಕ್ಕು ಬೇಟೆಯಾಡಿದ ಆರೋಪದಡಿ ಪೊನ್ನಂಪೇಟೆ ಅರಣ್ಯ ಇಲಾಖೆ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳಿಂದ ಜೋಡಿ ನಳಿಕೆ ಕೋವಿ ಹಾಗೂ ಮಾಂಸ ವಶಕ್ಕೆ ಪಡೆಯಲಾಗಿದೆ.

ಕುಟ್ಟಂದಿ ಗ್ರಾಮದವರಾದ ತೇಲಬೈಲು ಡೆನಿಲ್ (32) ಹಾಗೂ ಆಲಯಂಡ ಗಣಪತಿ (44) ಬಂಧಿತ ಆರೋಪಿಗಳು. ಭಾರತೀಯ ವನ್ಯಜೀವಿ ಕಾಯ್ದೆಯಡಿ ಬಂಧಿಸಿ ಆರೋಪಿಗಳನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಖಚಿತ ಮಾಹಿತಿಯಂತೆ ಗಣಪತಿ ಅವರ ಮನೆಯ ಆವರಣ ಶೋಧ ಮಾಡಿದಾಗ ಕಾಡುಬೆಕ್ಕಿನ ಕೂದಲು ಪತ್ತೆಯಾಗಿದೆ. ಇದರಂತೆ ವಿಚಾರಣೆ ಮಾಡಿದಾಗ ಡೆನಿಲ್‍ನೊಂದಿಗೆ ಬೇಟೆಯಾಡಿರುವ ಬಗ್ಗೆ ಗಣಪತಿ ಮಾಹಿತಿ ನೀಡಿದ್ದಾರೆ. ಅದರಂತೆ ಮಸಾಲೆ ಮಿಶ್ರಿತ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆ ಸಂದರ್ಭ ಆರ್‍ಎಫ್‍ಒ ಗಂಗಾಧರ್, ಡಿಆರ್‍ಎಫ್‍ಒ ರಾಕೇಶ್ ಸಿಬ್ಬಂದಿ ಪಾಲ್ಗೊಂಡಿದ್ದರು.

ವರದಿ: ಸುದ್ದಿಪುತ್ರ