ಶನಿವಾರಸಂತೆ, ನ. 1: ಅಪಹರಣ ಪ್ರಕರಣದಲ್ಲಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಬಳೂರು ಗ್ರಾಮದ ಅಶ್ವತ್ಥ್ ಬಂಧಿತ ಆರೋಪಿ. ಈತ 2014ರ ಮೇ 4ರಂದು ಇತರ 8 ಮಂದಿ ಆರೋಪಿಗಳೊಂದಿಗೆ ಕೊಡ್ಲಿಪೇಟೆ ಹೋಬಳಿ ಮಾವಿನಹಳ್ಳಿ ಗ್ರಾಮದ ಎಂ.ಎಲ್. ಉಮೇಂದ್ರ ಮತ್ತು ಸೋಮಶೇಖರ್ ಎಂಬವರ ಮೇಲೆ ಹಲ್ಲೆ ನಡೆಸಿದ್ದ. ಗಾಯಾಳುಗಳು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಪಹರಿಸಿಕೊಂಡು ಹೋಗಿದ್ದ.8 ಮಂದಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿತ್ತು.ಅವರಲ್ಲಿ ಅಶ್ವತ್ಥ್ ತಲೆ ಮರೆಸಿಕೊಂಡಿದ್ದ.

ಬುಧವಾರ ಪಿಎಸ್‍ಐ ಎಚ್.ಎಂ.ಮರಿಸ್ವಾಮಿ ಅವರ ನಿರ್ದೇಶನದಂತೆ ಆರೋಪಿಯನ್ನು ಬೆಂಬಳೂರು ಗ್ರಾಮದಲ್ಲಿ ಬಂಧಿಸಲಾಯಿತು.

ಬಂಧಿತ ಆರೋಪಿಯನ್ನು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ನ್ಯಾಯಾಧೀಶರು ಆರೋಪಿಯನ್ನು 15 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆಯ ಎಎಸ್‍ಐ ಎಚ್.ಎಂ.ಗೋವಿಂದ್ , ಸಿಬ್ಬಂದಿ ಚೆನ್ನಕೇಶವ, ರಮೇಶ್ ಪಾಲ್ಗೊಂಡಿದ್ದರು.