ಕುಶಾಲನಗರ, ನ. 1: ಖಾಸಗಿ ಬಸ್ ನಿಲ್ದಾಣ ಯೋಜನೆ ಕಾಮಗಾರಿ ನೆನೆಗುದಿಗೆ ಬಿದ್ದ ಹಿನ್ನೆಲೆ ಗ್ರಾಮೀಣ ಪ್ರದೇಶದ ಜನತೆಗೆ ಕುಶಾಲನಗರ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಗೆ ಪರದಾಡುವ ಸ್ಥಿತಿ ಮುಂದುವರೆದಿದೆ. ಅಂದಾಜು ರೂ. 1 ಕೋಟಿ ವೆಚ್ಚ ಮಾಡಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನಡೆದಿದ್ದರೂ ಹಲವು ಕಾರಣಗಳಿಂದ ನಾಗರಿಕರ ಸೇವೆಗೆ ಒದಗಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ.

ಮುಖ್ಯಮಂತ್ರಿಗಳ ಅನುದಾನದಡಿಯಲ್ಲಿ ರೂ. 40 ಲಕ್ಷ ವೆಚ್ಚದಲ್ಲಿ ಕಳೆದ 6 ವರ್ಷಗಳ ಹಿಂದೆ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರೂ ಕಾಮಗಾರಿ ನಿಧಾನಗತಿಯಲ್ಲಿ ನಡೆದು ಕುಂಟುತ್ತಾ ಸಾಗಿದೆ.

2012 ರ ಡಿಸೆಂಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ನಂತರದ ದಿನಗಳಲ್ಲಿ ರಾಜ್ಯದಲ್ಲಿ ಹಲವು ಮುಖ್ಯಮಂತ್ರಿಗಳು ಬದಲಾವಣೆಯಾಗಿದ್ದರೂ ಕುಶಾಲನಗರ ಖಾಸಗಿ ಬಸ್ ನಿಲ್ದಾಣ ಯೋಜನೆ ಮಾತ್ರ ಅಪೂರ್ಣಗೊಂಡು ಪ್ರಯಾಣಿಕರ ಸೇವೆಗೆ ಅಲಭ್ಯವಾಗಿದೆ.

ಖಾಸಗಿ ಬಸ್ ನಿಲ್ದಾಣದ ಕೆಲಸ ಕುಂಟುತ್ತಾ ಸಾಗುತ್ತಿರುವದು ಈ ಅವಾಂತರಕ್ಕೆ ಕಾರಣವಾಗಿದೆ. ಕುಶಾಲನಗರದ ಸುತ್ತಮುತ್ತ ಗ್ರಾಮಗಳಿಗೆ ಹಾಗೂ ತಾಲೂಕು ಕೇಂದ್ರವಾದ ಸೋಮವಾರಪೇಟೆಗೆ ಮತ್ತು ಜಿಲ್ಲೆಯ ಸಿದ್ದಾಪುರ, ವೀರಾಜಪೇಟೆ, ಗೋಣಿಕೊಪ್ಪ ಭಾಗಗಳಿಗೆ ಈ ಮೂಲಕ ದಿನನಿತ್ಯ 70ಕ್ಕೂ ಅಧಿಕ ಖಾಸಗಿ ಬಸ್‍ಗಳು ತೆರಳುತ್ತಿವೆ. ಅಂದಾಜು 4 ಸಾವಿರಕ್ಕೂ ಅಧಿಕ ಪ್ರಯಾಣಿಕರು ಕುಶಾಲನಗರ ಸುತ್ತಮುತ್ತಲ ಗ್ರಾಮೀಣ ಜನತೆ ದಿನನಿತ್ಯ ಕೆಲಸಗಳಿಗೆ ಖಾಸಗಿ ಬಸ್‍ಗಳನ್ನು ಅವಲಂಭಿಸಬೇಕಾಗಿದೆ.

ಪ್ರಸಕ್ತ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಖಾಸಗಿ ಬಸ್‍ಗಳು ಹೆದ್ದಾರಿ ರಸ್ತೆಯ ಅಂಚಿನಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ನಿಂತು ನಾಗರಿಕರಿಗೆ ಕಿರಿಕಿರಿ ಉಂಟುಮಾಡುತ್ತಿರುವದರೊಂದಿಗೆ ಈ ಪ್ರದೇಶ ಕಿಷ್ಕಿಂದೆಯಾಗಿ ಪರಿವರ್ತನೆಗೊಂಡಿದೆ.

ಪಟ್ಟಣದಲ್ಲಿ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಎಲ್ಲೆಂದರಲ್ಲಿ ಬಸ್‍ಗಳು, ರಿಕ್ಷಾಗಳು, ಖಾಸಗಿ ವಾಹನಗಳು ನಿಲುಗಡೆಗೊಂಡು ಪಟ್ಟಣದ ಹೃದಯ ಭಾಗ ಕಿಷ್ಕಿಂದೆ ಯಂತೆ ಮಾರ್ಪಾಡಾಗಿ ಅಪಾಯ ಕಾರಿ ಪ್ರದೇಶವಾಗಿ ಮಾರ್ಪಟ್ಟಿದೆ.

ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಎಸ್‍ಎಫ್‍ಸಿ ಯೋಜನೆಯಡಿಯಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಎರಡನೇ ಹಂತದ ರೂ. 20 ಲಕ್ಷ ವೆಚ್ಚದ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿ ಗಳಿಗೆ ಚಾಲನೆ ನೀಡುವದರೊಂದಿಗೆ ಬಹುತೇಕ ಕಾಮಗಾರಿ ಪೂರ್ಣ ಗೊಂಡಿದೆ.

ಆದರೆ ಬಸ್ ನಿಲ್ದಾಣಕ್ಕೆ ಮುಖ್ಯ ರಸ್ತೆಯಿಂದ ಸಂಪರ್ಕ ರಸ್ತೆ ವ್ಯಾಜ್ಯ ಇನ್ನೂ ಮುಗಿದಿಲ್ಲ. ಖಾಸಗಿ ವ್ಯಕ್ತಿಯೊಬ್ಬರಿಗೆ ಈ ರಸ್ತೆ ಸೇರಿದ್ದು ಎನ್ನಲಾಗಿದೆ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಗೊಂದಲ ನಿವಾರಣೆ ಆಗದಿರುವದು ಎಲ್ಲಾ ವೈಫಲ್ಯಗಳಿಗೆ ಕಾರಣವಾಗಿದೆ.

ಜನಪ್ರತಿನಿಧಿಗಳ ದೂರದೃಷ್ಟಿಯ ಕೊರತೆ ಕೂಡ ಅಭಿವೃದ್ಧಿ ಕೆಲಸಗಳ ಕುಂಠಿತಕ್ಕೆ ಪ್ರಮುಖ ಕಾರಣ ಎನ್ನುವದು ನಾಗರಿಕರ ಆರೋಪವಾಗಿದೆ. ತಕ್ಷಣ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಯೋಜನೆ ಪೂರ್ಣಗೊಳಿಸಿ ಈ ಭಾಗದ ಗ್ರಾಮೀಣ ಜನತೆಯ ಸಂಪರ್ಕ ವ್ಯವಸ್ಥೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

- ಚಂದ್ರಮೋಹನ್