q ಗುಣಮಟ್ಟ ಕಳಪೆ ಆರೋಪ q ತನಿಖೆಗೆ ಆಗ್ರಹ

ಕೂಡಿಗೆ, ನ. 1: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ರೇಷ್ಮೆ ಕೃಷಿ ಕ್ಷೇತ್ರದ ಆವರಣದಲ್ಲಿ 16 ಎಕರೆ ಪ್ರದೇಶದಲ್ಲಿ ಪೂರ್ಣಗೊಳ್ಳುವ ಹಂತದಲ್ಲಿರುವ ರೂ. 12 ಕೋಟಿ ವೆಚ್ಚದ ಗೋದಾಮು ಕಾಮಗಾರಿ ತೀರಾ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ.

ಕಾಮಗಾರಿ ಪ್ರಾರಂಭವಾದ ಸಂದರ್ಭ ಸಾರ್ವಜನಿಕರು ಕಳಪೆ ಕಾಮಗಾರಿ ವಿಷಯವನ್ನು ಸ್ಥಳೀಯ ಜಿಲ್ಲಾ ಪಂಚಾಯಿತಿ, ತಾ.ಪಂ. ಸದಸ್ಯರು ಮತ್ತು ಶಾಸಕರ ಗಮನಕ್ಕೆ ತಂದ ಸಂದರ್ಭ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ನಿರ್ಮಾಣ ಹಂತದಲ್ಲಿರುವ ರೂ. 12 ಕೋಟಿ ಕಾಮಗಾರಿಯ ಉಗ್ರಾಣ ಘಟಕದ ಕೆಲಸವನ್ನು ವೀಕ್ಷಿಸಿ ಆಶ್ಚರ್ಯ ಚಕಿತರಾಗಿದ್ದರು.

ಕ್ಷೇತ್ರದ ಶಾಸಕನಾಗಿರುವ ತನ್ನ ಗಮನಕ್ಕೂ ಬಾರದೆ, ಯಾವದೇ ರೀತಿಯ ಶಂಕುಸ್ಥಾಪನೆಗಳಾಗದೆ ನಡೆಯುತ್ತಿದೆ. ಕಾಮಗಾರಿ ನಡೆಯುವ ಸಂದರ್ಭ ಯಾವದೇ ರೀತಿಯ ಕಾಮಗಾರಿಯ ನಕ್ಷೆಯೂ ಇಲ್ಲದೆ, ಅದಕ್ಕೆ ಸಂಬಂಧಪಟ್ಟ ಗುಣಮಟ್ಟ ಪರೀಕ್ಷಿಸುವ ಅಧಿಕಾರಿಯೂ ಸ್ಥಳದಲ್ಲಿ ಇಲ್ಲದೆ ಮನಬಂದಂತೆ ಕಲ್ಲುಪುಡಿಯನ್ನು ಸಿಮೆಂಟ್‍ನೊಂದಿಗೆ ಸೇರಿಸಿ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕ ರಾಜ್ಯ ಆಹಾರ ಉಗ್ರಾಣ ನಿಗಮದವರು ರಾಜ್ಯಮಟ್ಟದಲ್ಲಿ ಟೆಂಡರ್ ಕರೆದು ನೀಡಿರುವದೇನೋ ಸರಿ, ಆದರೂ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿದೆಯೋ ಇಲ್ಲವೋ ಎಂಬ ಅನುಮಾನ ಬಂದಿದೆ ಎಂದು ಶಾಸಕರು ಹೇಳಿದ್ದರು.

ಪ್ರಸ್ತುತ 2018ರ ವರ್ಷದಲ್ಲಿ ಉಗ್ರಾಣದ ಮೇಲ್ಛಾವಣಿ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳುವ ಹಂತದಲ್ಲಿರುವ ಕಾಮಗಾರಿಯೂ ಕೂಡಾ ಕಳಪೆಯಾಗಿದೆ. ಅಂತರರಾಜ್ಯ ಗುತ್ತಿಗೆದಾರರು ಟೆಂಡರ್ ಪಡೆದು ಸ್ಥಳೀಯ ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿ ಗಳಿಗಾಗಲೀ ವಿವರವನ್ನು ಕೇಳಬಯಸಿದರೂ ತಿಳಿಸದ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ.

ಈ ವಿಚಾರವಾಗಿ ಸುದ್ದಿಗಾರರು ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಕೂಡಿಗೆಯಲ್ಲಿ ನಡೆಯುತ್ತಿರುವ ರೂ. 12 ಕೋಟಿಯ ಕಾಮಗಾರಿ ಬಗ್ಗೆ ಸಂಬಂಧಪಟ್ಟಂತೆ ಸೂಕ್ತ ಮಾಹಿತಿಯನ್ನು ಜಿಲ್ಲಾ ಅಥವಾ ರಾಜ್ಯ ಮಟ್ಟದ ಅಧಿಕಾರಿಗಳು ಒದಗಿಸುವಂತೆ ಸೂಚಿಸಲಾಗಿದ್ದು, ಒಂದೂವರೆ ವರ್ಷ ಕಳೆದರೂ ಕಾಮಗಾರಿಯ ನಕ್ಷೆಯನ್ನಾಗಲೀ ಪೂರ್ಣ ಮಾಹಿತಿಯನ್ನು ಒದಗಿಸಿಲ್ಲ. ಈ ಕಾಮಗಾರಿ ರಾಜ್ಯ ಮತ್ತು ಕೇಂದ್ರದ ಪಡಿತರ ವಸ್ತುಗಳು, ರಾಸಾಯನಿಕ ಗೊಬ್ಬರಗಳ ದಾಸ್ತಾನು ಇಡಲು ರಾಜ್ಯ ಸರ್ಕಾರವು ಎಲ್ಲಾ ಜಿಲ್ಲೆಗಳಿಗೆ ಬೃಹತ್ ಗೋದಾಮು ನಿರ್ಮಾಣ ಮಾಡಲು ಹಣ ಬಿಡುಗಡೆ ಮಾಡಿದೆ. ಅದರಂತೆ ಜಿಲ್ಲೆಗೂ ಬೃಹತ್ ಗೋದಾಮು ಕಾಮಗಾರಿ ನಡೆಯುತ್ತಿದ್ದರೂ, ಈ ಕಾಮಗಾರಿಯ ಸಂಪೂರ್ಣ ವಿವರ ತನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಈ ಬಗ್ಗೆ ಸುದ್ದಿಗಾರರು ಮಾಹಿತಿ ಬಯಸಿದರೆ ದೆಹಲಿ, ಬೆಂಗಳೂರು ಮಟ್ಟದಲ್ಲಿ ಕಚೇರಿ ಇದೆ. ಅಲ್ಲಿಂದ ಮಾಹಿತಿ ಪಡೆಯಿರಿ ಎಂಬ ಮಾತು ಬಿಟ್ಟರೆ, ಕಚೇರಿಯ ಸಂಪರ್ಕಕ್ಕೆ ದೂರವಾಣಿ ಸಂಖ್ಯೆಯನ್ನಾಗಲೀ ಅಥವಾ ಯಾವ ಮಾಹಿತಿಯನ್ನು ಇಲ್ಲಿ ಕಾರ್ಯನಿರ್ವಹಿಸುವ ಸಹಾಯಕ ಇಂಜಿನಿಯರ್ ಅವರು ನೀಡುವದಿಲ್ಲ. ಇಲಾಖೆಯವರಾಗಲಿ, ಗುತ್ತಿಗೆದಾರರಾಗಲಿ ಯಾವದೇ ಮಾಹಿತಿಯನ್ನು ನೀಡದೆ ಬೃಹತ್ ಗೋದಾಮು ಕಾಮಗಾರಿ ನಡೆಸುತ್ತಿರು ವದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿ ಕಾಮಗಾರಿಯ ಗುಣ ಮಟ್ಟದ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.