ಮಡಿಕೇರಿ, ನ. 25: ಧರ್ಮಗಳು ಮನಸ್ಸುಗಳನ್ನು ಕಟ್ಟುವ ಕೆಲಸ ಸಮಾಜಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ. ಅವರು ಇಲ್ಲಿನ ಕಾವೇರಿ ಹಾಲ್‍ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಶಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಸೀರತ್ ಪ್ರಯುಕ್ತ ಸದ್ಭಾವನಾ ಸಮಾವೇಶದಲ್ಲಿ ಸಂದೇಶ ನೀಡುತ್ತಾ ಈ ವಿಷಯ ತಿಳಿಸಿದರು ಧರ್ಮವನ್ನು ಅರ್ಥೈಸಿಕೊಳ್ಳು ವಲ್ಲಿ ಜನತೆ ವಿಫಲವಾಗುತ್ತಿವೆ. ಧರ್ಮಗಳ (ಮೊದಲ ಪುಟದಿಂದ) ಬೋಧನೆಗಳಾದ ಸಚ್ಚಾರಿತ್ರ್ಯ, ಕೋಮು ಸೌಹಾರ್ದ ಹಾಗೂ ಪರಿಶುದ್ಧ ಜೀವನವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಇಂದು ಸಮಾಜದಲ್ಲಿ ಕಠಿಣತೆ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಸ್ಲಾಮ್ ಧರ್ಮ ಜಗತ್ತಿಗೆ ಪರಿಚಯಿಸಿದ ಪ್ರವಾದಿ ಮುಹಮ್ಮದರು ಸ್ನೇಹ, ಸಹಬಾಳ್ವೆ, ಪರಸ್ಪರ ವಿಶ್ವಾಸ ಮತ್ತು ಹೃದಯ ವೈಶಾಲ್ಯತೆಯನ್ನು ಜಗತ್ತಿಗೆ ಸಾರಿದರು. ಪ್ರವಾದಿಗಳ ಉಪದೇಶದಿಂದ ದೂರ ಸರಿದಿರುವದರಿಂದ ಇಂದು ಸಮಾಜ ತೀವ್ರತರದ ಸಮಸ್ಯೆಗಳನ್ನು ಎದುರಿಸುತ್ತಿದೆ’ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಮ್ಮ ಭಾಷಣದಲ್ಲಿ ಮೂರು ತಿಂಗಳ ಹಿಂದೆ ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಸಂದರ್ಭ ಜನತೆ ಜಾತಿ-ಮತ-ಧರ್ಮವನ್ನು ಮರೆತು ಕೈಜೋಡಿಸಿರುವದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಜಿಲ್ಲೆಯ ಸೌಹಾರ್ದತೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವದು ಆಶಾದಾಯಕವಾಗಿದೆ. ಸ್ವಯಂ ಸೇವಾ ಸಂಸ್ಥೆಗಳೂ ತಮ್ಮ ಕರ್ತವ್ಯವನ್ನು ಅರಿತು ಕೆಲಸ ನಿರ್ವಹಿಸಿದ್ದು ಆಡಳಿತ ವರ್ಗಕ್ಕೆ ನೆರವಾಯಿತು ಎಂದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿ, ಶಾಂತಿಯೊಂದಿಗೆ ಕಾನೂನು ಪಾಲನೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವದು ಸಾಧ್ಯವೆಂದು ತಿಳಿ ಹೇಳಿದರು.

ಸೀರತ್ ಸಂದೇಶ ನೀಡಿದ ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಎಂ.ಹೆಚ್. ಮುಹಮ್ಮದ್ ಕುಂಞÂ ಮಾತನಾಡುತ್ತಾ, ಧರ್ಮದ ಜ್ಞಾನದ ಹೊರತಾಗಿ ಧರ್ಮ ರಕ್ಷಣೆಗೆ ಹೊರಟಿರುವವರಿಂದ ಇಂದು ಧರ್ಮವು ಅಪಾಯದ ಸ್ಥಿತಿಯನ್ನು ಎದುರಿಸುತ್ತಿದೆ. ಧರ್ಮದ ವಕ್ತಾರರೆಂದೇ ಹೇಳಿಕೊಳ್ಳುವವರು ದೇವನನ್ನು ಗುರುತಿಸದೆ ಧರ್ಮ ರಕ್ಷಣೆಗೆ ಹೊರಟಿರುವದು ಗಂಡಾಂತರಕಾರಿ ಬೆಳವಣಿಗೆಯಾಗಿದೆ ಎಂದು ವಿಷಾಧಿಸಿದರು. ಇಸ್ಲಾಂ ಮನುಷ್ಯನನ್ನು ಭೂಮಿಯಲ್ಲಿ ದೇವನ ಪ್ರತಿನಿಧಿಯೆಂದು ಪರಿಚಯಿಸಿತು. ಪ್ರತಿ ಮನುಷ್ಯನಿಗೂ ಗೌರವಾರ್ಹವಾದ ಸ್ಥಾನವಿದೆ. ಸಹಜೀವಿಗಳನ್ನು ಗೌರವಿಸುವದು ಧರ್ಮ ವಿಶ್ವಾಸದ ಭಾಗವೆಂದು ಇಸ್ಲಾಮ್ ಕಲಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಸಂತ ಮೈಕಲ್ ದೇವಾಲಯದ ಫಾ. ನವೀನ್ ಕುಮಾರ್ ಸಮಾವೇಶವನ್ನು ಉದ್ದೇಶಿ ಮಾತನಾಡುತ್ತಾ, ಪ್ರೀತಿಯೆಂಬದೇ ಮನುಷ್ಯ ಬದುಕಿನ ಜೀವಾಳವಾಗಿದೆ. ಪರಸ್ಪರ ಪ್ರೀತಿಯ ಹೊರತಾದ ಸಂಬಂಧಕ್ಕೆ ಯಾವದೇ ಬೆಲೆಯಿಲ್ಲ. ಸಹೋದರತೆಗೆ ಹಿಂದೆಂದಿಗಿಂತಲೂ ಇಂದು ಪ್ರಸ್ತುತತೆ ಹೆಚ್ಚಾಗಿದೆ ಎಂದರು.

ಸನ್ಮಾನ: ಸಮಾವೇಶದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ರಕ್ಷಣಾ ಕಾರ್ಯ ನಿರ್ವಹಿಸಿದ ಮತ್ತು ಆರ್ಥಿಕ ನೆರವು ನೀಡಿ ಜನರ ಮೆಚ್ಚುಗೆಗೆ ಪಾತ್ರರಾದ 15 ಮಂದಿ ರಕ್ಷಣಾ ಕಾರ್ಯಕರ್ತರುಗಳನ್ನು ಹೆಚ್.ಆರ್.ಎಸ್. ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಸುಬೇದಾರ್ ಕುಟ್ಟಂಡ ಯು. ಬೋಪಣ್ಣ, ಮೋಕ್ಷಿತಾ ಗೌರವ್ ಪಟೇಲ್ ಹಾಗೂ ಸುಂಟಿಕೊಪ್ಪದ ಸಿ.ಎಂ. ಅಬ್ದುಲ್ ಹಮೀದ್ ಮೌಲವಿ ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಯು. ಅಬ್ದುಸ್ಸಲಾಮ್ ಅಧ್ಯಕ್ಷೀಯ ಭಾಷಣ ಮಾಡಿದರು. ಜಿಲ್ಲಾ ಅಧ್ಯಕ್ಷ ಸಿ.ಹೆಚ್. ಅಫ್ಸರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾರೈ, ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಶೇಖ್ ಕಲೀಮುಲ್ಲಾ, ಅಮಿನ್ ಹಸನ್, ಬದ್ರಿಯಾ ಮಸೀದಿ ಅಧ್ಯಕ್ಷ ಎಂ.ಜಿ.ಯೂಸುಫ್ ಹಾಜಿ, ಸೋಲಿಡಾರಿಟಿ ಯೂತ್‍ಮೂವ್‍ಮೆಂಟ್ ಅಧ್ಯಕ್ಷ ಟಿ.ಎ. ಬಷೀರ್ ಅಹಮದ್ ಎಸ್.ಐ.ಓ. ಮಡಿಕೇರಿ ಶಾಖೆ ಅಧ್ಯಕ್ಷ ರಾಖಿಮ್ ಮನ್ನಾ, ಜಿ.ಹೆಚ್. ಮುಹಮ್ಮದ್ ಹನೀಫ್ ವೇದಿಕೆಯಲ್ಲಿದ್ದರು. ಉಮರ್ ಮೌಲವಿ ಪ್ರಾರ್ಥನಾಗೀತೆ ಪಠಿಸಿದರು. ಜಲೀಲ್ ಮುಕ್ರಿ ಹಾಗೂ ಪಿ.ಕೆ. ಅಬ್ದುಲ್ ರೆಹೆಮಾನ್ ಕಾರ್ಯಕ್ರಮಗಳನ್ನು ನಿರೂಪಿಸಿದರು. ಎಂ.ಹೆಚ್. ಮುಹಮ್ಮದ್ ಮುಸ್ತಫಾ ಧನ್ಯವಾದವಿತ್ತರು.