ಮಡಿಕೇರಿ, ನ. 25: ವಿಧಿಯಾಟಕ್ಕೆ ಸಿಲುಕಿ ಯಾರೂ ಊಹಿಸದ ಮಾದರಿ ಯಲ್ಲಿ ಸಂಭವಿಸಿದ ದುರ್ಘಟನೆ ಯೊಂದರಲ್ಲಿ ವಿವಾಹಿತ ಯುವಕನೋರ್ವ ಕಟ್ಟಡವೊಂದರ ಮೇಲ್ಭಾಗದಿಂದ ಬಿದ್ದು ಸಾವಿಗೀಡಾದ ದಾರುಣ ಘಟನೆಯೊಂದು ನಿನ್ನೆ ಸಂಜೆ ನಾಪೋಕ್ಲುವಿನಲ್ಲಿ ನಡೆದಿದೆ.ಮೂಲತಃ ಬಲ್ಲಮಾವಟಿ ಗ್ರಾಮದ ತಾಪಂಡ ಸಾಬು ಮೊಣ್ಣಪ್ಪ ಅವರ ಪುತ್ರ ನಿಖಿಲ್ (36) ದುರಂತ ಸಾವಿಗೀಡಾದ ಯುವಕ.ಶ್ರಮ ಜೀವಿ ಹಾಗೂ ಸ್ನೇಹಜೀವಿ ಯಾಗಿದ್ದ ನಿಖಿಲ್ ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಉದ್ಯೋಗದಲ್ಲಿದ್ದು ಒಂದೆರಡು ವರ್ಷಗಳ ಹಿಂದೆಯಷ್ಟೆ ಜಿಲ್ಲೆಗೆ ಮರಳಿದ್ದರು. ಇಲ್ಲಿ ವಿವಾಹವಾದ ಬಳಿಕ ಅವರು ನಾಪೋಕ್ಲುವಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಖಾಸಗಿ ಬಸ್‍ವೊಂದನ್ನು ಖರೀದಿಸಿದ್ದರಲ್ಲದೆ ಇನ್ನಿತರ ಚಟುವಟಿಕೆಗಳ ಮೂಲಕ ಕೊಡಗಿನಲ್ಲೇ ನೆಲೆ ಕಂಡುಕೊಂಡಿದ್ದರು.

ನಿನ್ನೆ ಸಂಜೆ ಕಟ್ಟಡದ ಮೇಲ್ಭಾಗದಲ್ಲಿ ಸ್ನೇಹಿತರೊಬ್ಬರೊಂದಿಗೆ

(ಮೊದಲ ಪುಟದಿಂದ) ಮಾತನಾಡುತ್ತಿದ್ದ ವೇಳೆ ಇವರ ಮೊಬೈಲ್‍ಗೆ ಕರೆ ಬಂದಿದೆ ಎನ್ನಲಾಗಿದೆ. ಈ ಸಂದರ್ಭ ನಿಖಿಲ್ ಮೆಟ್ಟಿಲುಗಳ ಮೇಲ್ಭಾಗಕ್ಕೆ ಅಳವಡಿಸಿದ್ದ ಶೀಟ್ ಮೇಲೆ ಕೈಯಿಟ್ಟು ಮಾತನಾಡಲು ಮುಂದಾಗಿದ್ದಾರೆ. ಈ ಸಂದರ್ಭ ಶೀಟ್ ಒಡೆದು ಆಯ ತಪ್ಪಿ ಎರಡು ಅಂತಸ್ತಿನ ಕಟ್ಟಡದ ಮೇಲ್ಭಾಗದಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಮೂಳೆಗಳು ಪುಡಿ ಪುಡಿಯಾಗಿದ್ದು ಇವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಯತ್ತ ಸಾಗಿಸಲು ಪ್ರಯತ್ನ ನಡೆದಿದೆ. ಆದರೆ ಘಟನೆಯಿಂದ ತೀರ ಘಾಸಿಗೊಳಗಾಗಿದ್ದ ನಿಖಿಲ್ ಸುಳ್ಯ ತಲಪವಷ್ಟರಲ್ಲಿ ಮೃತಪಟ್ಟಿದ್ದಾರೆ.

ನಿಖಿಲ್ ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಅನಿರೀಕ್ಷಿತ ಆಘಾತ ಸಿಡಿಲೆರಗಿದಂತೆ ಈ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಅಂತ್ಯಕ್ರಿಯೆ ಇಂದು ಸ್ವಗ್ರಾಮದ ಬಲ್ಲಮಾವಟಿಯಲ್ಲಿ ಜರುಗಿತು. ಶ್ರಮಜೀವಿಯಾಗಿ ಉತ್ತಮ ಜೀವನ ನಡೆಸುತ್ತಿದ್ದ ನಿಖಿಲ್ ಸಾವಿನ ಬಗ್ಗೆ ಹಲವಾರು ಮಂದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.