ಕುಶಾಲನಗರ, ನ. 26: ಕುಶಾಲನಗರದ ಐತಿಹಾಸಿಕ ಮಹಾಗಣಪತಿ ದೇವರ 98ನೇ ವಾರ್ಷಿಕ ರಥೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಸೋಮವಾರ ಭಕ್ತಿಭಾವದಿಂದ ಜರುಗಿತು. ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಮಧ್ಯಾಹ್ನ 12 ಗಂಟೆಗೆ ಅಭಿಜಿನ್ ಲಗ್ನದಲ್ಲಿ ನಡೆದ ರಥೋತ್ಸವದ ಅಂಗವಾಗಿ ಗಣಪತಿ ದೇವಾಲಯದಲ್ಲಿ ಬೆಳಗ್ಗೆಯಿಂದ ದೇವರಿಗೆ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ ನಂತರ ರಥಪೂಜೆ, ರಥಬಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಬಸವಾಪಟ್ಟಣದ ವೇ.ಬ್ರ. ಸುಬ್ಬುಕೃಷ್ಣ ದೀಕ್ಷಿತ್ ನೇತೃತ್ವದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ಆರ್.ಕೆ.ನಾಗೇಂದ್ರ ಮತ್ತು ಅರ್ಚಕರ ತಂಡದಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ರಥಬೀದಿಯ ಉದ್ದಗಲಕ್ಕೂ ಭಕ್ತಾದಿಗಳು ರಥಕ್ಕೆ ಹಣ್ಣುಕಾಯಿ ಅರ್ಪಿಸುವದರೊಂದಿಗೆ ನಮನ ಸಲ್ಲಿಸಿ, ಪೂಜೆಯಲ್ಲಿ ಪಾಲ್ಗೊಂಡರು. ರಥೋತ್ಸವದಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ನೆರೆಯ ಜಿಲ್ಲೆಗಳ ಸಾವಿರಾರು ಭಕ್ತರು ಪಾಲ್ಗೊಂಡರು. ದೇವಾಲಯದಿಂದ ರಥ ಬೀದಿಯ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈಡುಗಾಯಿ ಒಡೆದು ಹರಕೆ ತೀರಿಸುತ್ತಿದ್ದ ದೃಶ್ಯ ಗೋಚರಿಸಿತು. ರಥಬೀದಿಯ ವರ್ತಕರಿಂದ, ಭಕ್ತಾದಿಗಳಿಗೆ ತಂಪುಪಾನೀಯ, ಸಿಹಿ ವಿತರಣೆ ನಡೆಯಿತು.

ಮೆರವಣಿಗೆ ಪ್ರಾರಂಭದಲ್ಲಿ ರಥದ ಮುಂಭಾಗದಲ್ಲಿ ಅಯ್ಯಪ್ಪ

(ಮೊದಲ ಪುಟದಿಂದ) ವ್ರತಧಾರಿಗಳು ಕರ್ಪೂರ ಹಚ್ಚಿ ಅಯ್ಯಪ್ಪ ಸ್ಮರಣೆಯೊಂದಿಗೆ ದೇವರ ಕೀರ್ತನೆ ಹಾಡಿದರು.

ರಥೋತ್ಸವದ ನಂತರ ಗಣಪತಿ ರಥೋತ್ಸವ ಅನ್ನಸಂತರ್ಪಣ ಸಮಿತಿಯ ವತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಸ್ಥಳೀಯ ಮಾರುಕಟ್ಟೆ ರಸ್ತೆ ಗಾಯತ್ರಿ ಕಲ್ಯಾಣ ಮಂಟಪ ಆವರಣದಲ್ಲಿ ಅನ್ನಸಂತರ್ಪಣೆ ನಡೆಯಿತು. ದೇವಾಲಯ ಸಮಿತಿಯ ಪ್ರಮುಖರಾದ ಎಂ.ಕೆ.ದಿನೇಶ್, ಕೆ.ಎನ್.ಸುರೇಶ್, ಜಿ.ಎಲ್.ನಾಗರಾಜ್ ನೇತೃತ್ವದ ತಂಡ ಅಂದಾಜು 12 ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯ ನೆರವೇರಿಸಿದರು.

ಕುಶಾಲನಗರ ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ರಥೋತ್ಸವ ಸಂದರ್ಭ ಸಮಿತಿಯ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಉಪಾಧ್ಯಕ್ಷ ಆರ್.ಬಾಬು, ಗೌರವ ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸ್‍ರಾವ್, ಕಾರ್ಯಕಾರಿ ಮಂಡಳಿ ನೇತೃತ್ವದಲ್ಲಿ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದಿಂದ ರಥಬೀದಿ ಮೂಲಕ ಆಂಜನೇಯ ದೇವಸ್ಥಾನದವರೆಗೆ ಭಕ್ತಾದಿಗಳು ಜಯ ಘೋಷಣೆಗಳೊಂದಿಗೆ ಭಕ್ತಿಯಿಂದ ರಥವನ್ನು ಎಳೆದೊಯ್ದರು. ಭಕ್ತಾದಿಗಳು ದೇವರಿಗೆ ಹಣ್ಣುಕಾಯಿ ಅರ್ಪಿಸಿ, ಭಕ್ತಿಯಿಂದ ವಿಘ್ನ ವಿನಾಯಕನಿಗೆ ನಮಿಸುವದರೊಂದಿಗೆ ರಥಕ್ಕೆ ಹೂವು, ಬಾಳೆಹಣ್ಣು, ಜವುನ ಎಸೆಯುವದರೊಂದಿಗೆ ಭಕ್ತಿ ಪರಾಕಾಷ್ಟೆ ಮೆರೆದರು. ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಪೂಜೋತ್ಸವದಲ್ಲಿ ಪಾಲ್ಗೊಂಡಿದ್ದರು.

ಜಾತ್ರೆ ಸಂದರ್ಭ ಸರಗಳ್ಳತನ, ಪಿಕ್‍ಪಾಕೆಟ್ ಪ್ರಕರಣಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ 30 ಕ್ಕೂ ಅಧಿಕ ಸಂಶಯಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ರಥೋತ್ಸವ ದಾರಿ ನಡುವೆ 25 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಜಿಲ್ಲಾ ಅಪರಾಧ ಪತ್ತೆದಳದ ತಂಡದ ಸದಸ್ಯರು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಕಾರಣ ಈ ಬಾರಿಯ ಉತ್ಸವದಲ್ಲಿ ಯಾವದೇ ರೀತಿಯ ಅಚಾತುರ್ಯಗಳು ನಡೆದಿಲ್ಲ.

ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ಡಿಸಿಐಬಿ ಅಧಿಕಾರಿ ಮಹೇಶ್, ಠಾಣಾಧಿಕಾರಿಗಳಾದ ಜಗದೀಶ್, ನವೀನ್ ಗೌಡ ಮತ್ತು ತಾಲೂಕಿನ ವಿವಿಧ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಾರ್ಯ ನಿರ್ವಹಿಸಿದರು.