ಮಡಿಕೇರಿ, ನ. 26: ಇತ್ತೀಚೆಗೆ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ ಹಾಕಿ ಪಂದ್ಯಾವಳಿಗೆ ಜಿಲ್ಲೆಯಿಂದ ಆಯ್ಕೆಯಾಗಿದ್ದ ಪೊನ್ನಂಪೇಟೆ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲೆಯ ಆರು ಮಂದಿ ಹಾಕಿ ಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲೆಯ ಎಂ.ಎ. ಗೌತಂ, ಹೆಚ್. ಕಾಮೇಶ್, ಮಹಮ್ಮದ್ ಹುಮೈಸ್, ಪೃಥ್ವಿಚಂದ್ರ, ಬಿ. ಅರ್ಜುನ್ ಹಾಗೂ ಎಸ್. ಆದಿರಾ ಅವರುಗಳು ಆಯ್ಕೆಯಾಗಿದ್ದಾರೆ. ಮುಂದಿನ ತಿಂಗಳಲ್ಲಿ ಜಾರ್ಖಂಡ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಕ್ರೀಡಾಪಟುಗಳು ಪೊನ್ನಂಪೇಟೆ ಕ್ರೀಡಾ ವಸತಿಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಗೌತಂ ಅಪ್ಪಣ್ಣ ಹಾಗೂ ಅಮಿತಾ ದಂಪತಿಯರ ಪುತ್ರನಾಗಿದ್ದರೆ, ಕಾಮೇಶ್ ಪಿ.ಹರೀಶ್ ಹಾಗೂ ವನಜ ಅವರ ಪುತ್ರ. ಹುಮೈಸ್ ಅಮ್ಜದ್ ಹಾಗೂ ನವೀನ್, ಪೃಥ್ವಿಚಂದ್ರ ಬಿ.ಸಿ. ಚಂದ್ರ ಹಾಗೂ ಹೆಚ್.ಕೆ. ಜ್ಯೋತಿ ಅವರುಗಳ ಪುತ್ರ. ಅರ್ಜುನ್ ಪಿ.ಕೆ. ಬೋಸ್ ಹಾಗೂ ಚಂದ್ರಿಕಾ ಅವರುಗಳ ಮಗನಾಗಿದ್ದರೆ, ಆದಿರಾ ಸುರೇಶ್ ಹಾಗೂ ಸುನಂದ ಮಣಿ ಅವರುಗಳ ಪುತ್ರಿ.