ಗೋಣಿಕೊಪ್ಪಲು, ನ. 26: ಸಿದ್ದಾಪುರ ಠಾಣಾ ವ್ಯಾಪ್ತಿಯ ಅಂಚೆ ಬೆಟ್ಟ ಕಾಫಿ ತೋಟದ ಕಾರ್ಮಿಕ ಕುಮಾರ್ (38) ಎಂಬಾತ ತಾನು ವಾಸಿಸುವ ಲೈನ್‍ಮನೆಯ ಸಮೀಪವಿರುವ ಆಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ನಂಜನಗೂಡು ತಾಲೂಕಿನ ಕಳಂದ ಹೋಬಳಿಯ ನಿವಾಸಿಯಾಗಿರುವ ಮಾರಶೆಟ್ಟಿ ಎಂಬವರ ಮಗನಾಗಿರುವ ಕುಮಾರ್ ಕಳೆದ ಒಂದು ತಿಂಗಳ ಹಿಂದೆ ಕೊಡಗಿಗೆ ಕಾಫಿ ತೋಟದ ಕೆಲಸಕ್ಕಾಗಿ ಕುಟುಂಬ ಸಮೇತ ಆಗಮಿಸಿದ್ದ. ಕುಮಾರ್ ತನ್ನ ಪತ್ನಿ ಹಾಗೂ ಎರಡು ಮಕ್ಕಳನ್ನು ಅಗಲಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ತರಲಾಗಿದ್ದು ಇಲ್ಲಿಯ ವೈದ್ಯರಾದ ಡಾ.ಸುರೇಶ್ ಮರಣೊತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು.ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- ಹೆಚ್.ಕೆ.ಜಗದೀಶ್